ರಾಯಚೂರು : ಅಧಿಕಾರದ ದಾಹದಿಂದ ಪ್ರತಾಪ್ಗೌಡ ಪಾಟೀಲ್ ಶಾಸಕರಾಗಿದ್ದೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಅಂತಾ ಕಾಂಗ್ರೆಸ್ ನಾಯಕರು ಸುಮ್ಮನೆ ಬೊಗಳೆ ಹೊಡೆಯುತ್ತಿದ್ದಾರೆ ಅಂತ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಉಸ್ತುವಾರಿ ವಹಿಸಿಕೊಂಡು ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕಾಗಿ 17 ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಹತಾಶೆ ಭಾವದಿಂದ ಕಾಂಗ್ರೆಸ್ನವರು ಇಲ್ಲಸಲದ್ದ ಆರೋಪ ಮಾಡುವ ಮೂಲಕ ಬೊಗಳೆ ಹೊಡೆಯುತ್ತಿದ್ದಾರೆ.
ಎಂಟಿಬಿ ನಾಗರಾಜ್, ಆರ್.ಶಂಕರ್ ಅವರು ಸಚಿವರಾಗಿದ್ದರೂ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ನ ವೈಫಲ್ಯದ ಪರಿಣಾಮ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ, 15 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ ಎಂದರು.
ಇದೀಗ ನಡೆಯುತ್ತಿರುವ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸಹ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಬಾರಿ ಬಹು ಮತದಿಂದ ಗೆಲ್ಲುವುದು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಕಮಿಷನ್ ಸರ್ಕಾರವಾಗಿದೆ ಎಂಬ ಆರೋಪಕ್ಕೆ ಪ್ರಕ್ರಿಯಿಸಿ, ಕಾಂಗ್ರೆಸ್ ಕಳೆದ ಬಾರಿ ಶಿರಾ, ಕೆಆರ್ಪೇಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿನ ಸೋಲುಂಡಿದೆ.
ಇದು ಕಾಂಗ್ರೆಸ್ನವರ ನಿದ್ದೆಗೆಡಿಸಿದೆ. ಹೀಗಾಗಿ, ಅವರು ಈ ರೀತಿ ಆರೋಪ ಮಾಡುತ್ತಿದ್ದಾರೆ. ವರುಣಾ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತಂತೆ ಪಕ್ಷದ ನಾಯಕರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.