ರಾಯಚೂರು: ಜಿಲ್ಲೆಯ ಲಿಂಗಸುಗೂರು ಎಪಿಎಂಸಿ ವರ್ತಕರು ಕೃಷಿ ಉತ್ಪನ್ನ ಮಾರುಕಟ್ಟೆ ಶುಲ್ಕ ತಾರತಮ್ಯ ವಿರೋಧಿಸಿ ವ್ಯಾಪಾರ, ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಎಪಿಎಂಸಿ ಅಧಿಕಾರಿಗಳಾದ ಭಾರತಿ, ಸುಮಿತ್ರಾ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕರರು, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಸಾಕಷ್ಟು ತೊಂದರೆಗಳನ್ನು ಸೃಷ್ಟಿಸಿದೆ. ಈಗ ಮಾರುಕಟ್ಟೆ ಶುಲ್ಕ 1 ರೂ. ವಿಧಿಸಿ ಆದೇಶ ಹೊರಡಿಸಿದ್ದು ತಾರತಮ್ಯ ಮಾಡಿದಂತಾಗಿದೆ ಎಂದರು.
ಮಾರುಕಟ್ಟೆ ಪ್ರಾಂಗಣದ ಹೊರಗಡೆ ಕೃಷಿ ಉತ್ಪನ್ನಗಳ ವ್ಯವಹಾರ ಮಾಡುವವರಿಗೆ ಶುಲ್ಕ ವಿನಾಯಿತಿ ನೀಡಿರುವುದು ಭಾರಿ ಅನ್ಯಾಯಕ್ಕೆ ಎಡೆಮಾಡಿದೆ. ಕಾರಣ ಏಕರೂಪದ ತೆರಿಗೆ ನೀತಿ ಜಾರಿಗೆ ತಂದು ವರ್ತಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವವರೆಗೆ ವ್ಯವಹಾರ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.