ರಾಯಚೂರು: ವಿಶಾಲವಾದ ಹೊಲ, ಅದರಲ್ಲಿ ಒಬ್ಬಂಟಿ ರೈತ, ಸರ ಸರನೇ ಓಡಾಡುತ್ತಿರುವ ಜೋಡೆತ್ತುಗಳು. ಇವೆಲ್ಲವನ್ನು ನಿಬ್ಬೆರಗಾಗುವಂತೆ ನೋಡುತ್ತಾ ನಿಂತ ಜನ, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬರದನಾಡು ಎಂದು ಕರೆಸಿಕೊಳ್ಳುವ ರಾಯಚೂರು ಜಿಲ್ಲೆಯಲ್ಲಿ.
ರೈತ ದೇಶದ ಬೆನ್ನೆಲುಬು, ಬೆಳಗಿನಿಂದ ಸಂಜೆಯವರೆಗೂ ಭೂಮಿಯಲ್ಲಿ ಬೆವರು ಹರಿಸುತ್ತಾನೆ. ಸಾಲ ಮಾಡಿ ತನ್ನಲ್ಲಿರುವ ಜೋಡೆತ್ತುಗಳ ಸಹಾಯದಿಂದ ಬೆಳೆ ಬೆಳೆದು, ಹಸಿದವರ ಹೊಟ್ಟೆ ತುಂಬಿಸಲು ಮುಂದಾಗುತ್ತಾನೆ. ರಾಯಚೂರಿನಂತಹ ಬರದ ಜಿಲ್ಲೆಯ ವಿಷಯಕ್ಕೆ ಬಂದ್ರೆ, ರೈತರ ಸಮಸ್ಯೆ ಹೇಳತೀರದು. ಆದ್ರೆ ಇಲ್ಲೋರ್ವ ರೈತ ಸಮಸ್ಯೆಗಳನ್ನು ಮೆಟ್ಟಿ ನಿಂತು ಎಲ್ಲರಿಗೂ ಮಾದರಿಯಾಗಿದ್ದಾನೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ರಾಯಚೂರಿನಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡುವುದರ ಜೊತೆಗೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕಷ್ಟ ಪಟ್ಟು ದುಡಿದರೆ ಸುಖ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಆರಿತು ರೈತನೋರ್ವ ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾನೆ. ಅಷ್ಟೇ ಅಲ್ಲದೇ ಇವರು ಉಳುಮೆ ಮಾಡುವ ವಿಧಾನವನ್ನು ನೋಡಿ ಅಕ್ಕಪಕ್ಕದ ಜಮೀನಿನವರು ನಿಬ್ಬೆರಗಾಗಿದ್ದಾರೆ.
ಮಾನವಿ ತಾಲೂಕು ಮುಷ್ಠೂರು ಗ್ರಾಮದ ರೈತ ಬೀರಪ್ಪ ಎಲ್ಲರ ಪ್ರಶಂಸೆಗೆ ಪಾತ್ರರಾದವರು. ತಮ್ಮ 14 ಎಕರೆ ಜಮೀನನ್ನು 9 ಗಂಟೆಯಲ್ಲಿ ಉಳುಮೆ ಮಾಡಿ ಸೈ ಎನಿಸಿಕೊಂಡಿದ್ದಾರೆ ಬೀರಪ್ಪ. ನಿನ್ನೆ ನಸುಕಿನ ಜಾವ ಸುಮಾರು 2 ಗಂಟೆಯಿಂದ ಉಳುಮೆ ಮಾಡಲು ಆರಂಭಿಸಿದ್ದರು. ತಮ್ಮಲ್ಲಿರುವ ಎರಡು ಜೋಡೆತ್ತುಗಳ ಸಹಕಾರ, ಮಗನ ಸಹಾಯದೊಂದಿಗೆ ಇಂತ ಕಷ್ಟದ ಕೆಲಸ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಇನ್ನು ರೈತ ಬೀರಪ್ಪನ ಉಳುಮೆಯನ್ನು ನೋಡಲು ಮುಷ್ಠೂರು ಗ್ರಾಮದ ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ಆಗಮಿಸಿ, ರೈತನ ಈ ಸಾಧನೆಯನ್ನ ಕಂಡು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ರೈತನ ದುಡಿಮೆಯ ಈ ಗುಣ ಎಲ್ಲರಿಗೂ ಮಾದರಿಯಾಗಿದ್ದು, ಬೀರಪ್ಪನ ಕೆಲಸದ ವೈಖರಿಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.