ಮೈಸೂರು: ಭಾರಿ ಮಳೆಗೆ ನಿನ್ನೆ(ಶುಕ್ರವಾರ) ಕುಸಿತಗೊಂಡಿದ್ದ ನಗರದ ಅಗ್ನಿಶಾಮಕ ದಳ ಕಟ್ಟಡದ ಸ್ಥಳಕ್ಕೆ ಸಿಎಂ ಬಿಎಸ್ವೈ ಪುತ್ರ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿನ್ನೆ ಸುರಿದ ಧಾರಾಕಾರ ಮಳೆಗೆ ನಗರದ ಸರಸ್ವತಿ ಪುರಂನಲ್ಲಿರುವ ಅಗ್ನಿಶಾಮಕ ದಳದ ಮುಖ್ಯ ಕಚೇರಿ ಮುಂಭಾಗದ ನಾಮಫಲಕದ ಗೋಡೆ ಕುಸಿದಿತ್ತು.
ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಸೂಚನೆ ಹಿನ್ನೆಲೆಯಲ್ಲಿ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ನೆರೆ ಪ್ರದೇಶಗಳಲ್ಲಿ ವಿಜಯೇಂದ್ರ ನೇತೃತ್ವದ ತಂಡ ಪ್ರವಾಸ ಮಾಡಲಿದೆ.
ಹುಣಸೂರು ತಾಲೂಕಿನ ವೀರನಹೊಸಹಳ್ಳಿಯ ಅಬ್ಬೂರು ಹಾಡಿಯಲ್ಲಿ ಮೃತಪಟ್ಟಿದ್ದ ಗಣೇಶ್ ಕುಟುಂಬಕ್ಕೆ ಸಾಂತ್ವನ ನಂತರ ಮುಳುಗಡೆ ಆಗಿರುವ ಹೈರಿಗೆ ಸೇತುವೆ, ಕಬಿನಿ ಜಲಾಶಯದ ಪ್ರದೇಶಗಳಿಗೆ ಭೇಟಿ ನೀಡಲಿರುವ ವಿಜಯೇಂದ್ರ ಅಲ್ಲಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂಜನಗೂಡಿನ ನೆರೆ ಪೀಡಿತ ಭಾಗಗಳಿಗೆ ಭೇಟಿ ನೀಡಿ, ನಂತರ ಚಾಮರಾಜನಗರಕ್ಕೆ ತೆರಳಲಿದ್ದಾರೆ. ಸ್ಥಳಿಯ ಶಾಸಕರಾದ ನಾಗೇಂದ್ರ ಹಾಗೂ ಗುಂಡ್ಲುಪೇಟೆ ಶಾಸಕ ನಿರಂಜನ್ ಸಾಥ್ ನೀಡಲಿದ್ದಾರೆ.