ಮೈಸೂರು : ಕೊರೊನಾ ಕರ್ಫ್ಯೂ ಹಿನ್ನೆಲೆ, ದಿನಸಿ, ತರಕಾರಿ, ಹಾಲು ಸೇರಿದಂತೆ ಅಗತ್ಯ ಸಾಮಾಗ್ರಿಗಳ ಅಂಗಡಿಗಳನ್ನು ಹೊರತುಪಡಿಸಿ, ಇತರೆ ಅಂಗಡಿಗಳನ್ನು ಮುಚ್ಚಿಸಲು ರಾಜ್ಯ ಸರ್ಕಾರ ಸೂಚನೆ ಕೊಟ್ಟಿರುವುದರಿಂದ ಮಂಗಳಮುಖಿಯರು, ಪ್ರಧಾನಿ ಮೋದಿ ಹಾಗೂ ಸಿಎಂ ಬಿಎಸ್ವೈ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಇಂದು ರಾತ್ರಿ 9 ರಿಂದ ಮೇ 12ರವರೆಗೆ ಕೊರೊನಾ ಕರ್ಫ್ಯೂ ಘೋಷಣೆ ಮಾಡಿರುವುದರಿಂದ, ದೇವರಾಜ ಅರಸು ರಸ್ತೆ, ಶಿವರಾಂ ಪೇಟೆ, ಅಶೋಕ ರಸ್ತೆ ಸೇರಿದಂತೆ ವಾಣಿಜ್ಯ ಕೇಂದ್ರಗಳಲ್ಲಿರುವ ಬಟ್ಟೆ, ಜ್ಯುವೆಲ್ಲರ್ ಶಾಪ್, ಶೂ ಸೇರಿದಂತೆ ಇತರೆ ಅಂಗಡಿಗಳ ಬಾಗಿಲು ಮುಚ್ಚಿವೆ.
ಪ್ರತಿನಿತ್ಯ ಇಂತಹ ಅಂಗಡಿಗಳಿಗೆ ತೆರಳಿ ಹಣ ಸಂಗ್ರಹ ಮಾಡುತ್ತಿದ್ದ ಮಂಗಳಮುಖಿಯರಿಗೆ ಹೊಡೆತ ಬಿದ್ದಿರುವುದರಿಂದ, ಜೀವನ ನಡೆಸಲು ಕಷ್ಟವಾಗಿದೆ.
ಇದನ್ನೂ ಓದಿ: ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿದ್ದನ್ನೇ ಆಡಳಿತಕ್ಕೆ ಬಂದಾಗ ಕದ್ದುಮುಚ್ಚಿ ಮಾಡುವುದು ಬಿಜೆಪಿಯ 'ಸಂಸ್ಕೃತಿ': ಹೆಚ್ಡಿಕೆ ಕಿಡಿ
ಈ ಹಿನ್ನೆಲೆ, ಸಯ್ಯಾಜಿ ರಾವ್ ರಸ್ತೆಗಳಲ್ಲಿ ಫುಟ್ಪಾತ್ ವ್ಯಾಪಾರಿಗಳ ಸ್ಥಳದಲ್ಲಿ ಮಂಗಳಮುಖಿಯರು ಭಿಕ್ಷೆ ಬೇಡಿ ಜೀವನ ದೂಡುವಂತಾಗಿದೆ. ಕೆಲವರು ದುಡ್ಡು ಕೊಟ್ಟು ಕಳುಹಿಸಿದರೆ, ಮತ್ತೆ ಕೆಲ ಸಾರ್ವಜನಿಕರು ಬೈದು ಕಳುಹಿಸುತ್ತಿದ್ದಾರೆ.