ಮೈಸೂರು: "ರಂಗಾಯಣದ ವತಿಯಿಂದ ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದಲ್ಲಿಯೂ ಜ.27ರಿಂದ ಫೆ.15ರವರೆಗೆ 'ಟಿಪ್ಪು ನಿಜಕನಸುಗಳು' ನಾಟಕ ಪ್ರದರ್ಶನ ಪ್ರವಾಸ ಆರಂಭಿಸಲಾಗಿದೆ" ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ. "ಮೈಸೂರು, ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಮಂಗಳೂರು, ಹಾಸನ, ಪುತ್ತೂರು, ಕೊಡಗು ಮತ್ತು ಮಂಡ್ಯದಲ್ಲಿ ಈ ನಾಟಕ ಒಟ್ಟು 26 ಯಶಸ್ವಿ ಪ್ರದರ್ಶನ ಕಂಡಿದೆ. ಈ ಪ್ರದೇಶಗಳ ಪ್ರತಿ ರಂಗಮಂದಿರವೂ ಹೌಸ್ಫುಲ್ ಆಗಿದ್ದವು. ಟಿಕೆಟ್ಗಳು 'ಸೋಲ್ಡ್ಔಟ್' ಆಗಿದ್ದವು. ಒಟ್ಟು 20 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ನಾಟಕ ವೀಕ್ಷಿಸಿದ್ದಾರೆ" ಎಂದರು.
ಟಿಪ್ಪು ಕರಾಳ ಮುಖದ ಅನಾವರಣ: "ಟಿಪ್ಪು ನಿಜಕನಸುಗಳು ನಾಟಕದ ಪ್ರದರ್ಶನದ ಆರಂಭದ ದಿನಗಳಲ್ಲಿ ಕೆಲವರು ತಕರಾರು ಎತ್ತಿದ್ದರು. ನಂತರ ನಾಟಕ ಪ್ರದರ್ಶನ ಸಾಗುತ್ತಿದ್ದಂತೆ ಅವರು ಮೌನಕ್ಕೆ ಜಾರಿದ್ದಾರೆ. ಟಿಪ್ಪು ಸುಲ್ತಾನನ ಇನ್ನೊಂದು ಕರಾಳ ಮುಖದ ಅನಾವರಣ ಸಾಕ್ಷಿಸಹಿತ ಪ್ರದರ್ಶನವಾಗುತ್ತಿದ್ದಂತೆ ಅವರೆಲ್ಲರಿಗೂ ಸತ್ಯದ ಅರಿವಾಗಿದೆ. ಇತ್ತೀಚೆಗೆ ಸಿಕ್ಕ ಅಧಿಕೃತ ಮಾಹಿತಿಯಂತೆ ಟಿಪ್ಪು ಸುಲ್ತಾನ ಕರ್ನಾಟಕದ ಆನೆಗುಂದಿ ಮತ್ತು ಹಂಪೆಯಲ್ಲಿ ಅನೇಕ ದೇವಾಲಯಗಳನ್ನು ನಾಶಪಡಿಸಿದ್ದು ಕೂಡಾ ಬಯಲಾಗಿದೆ. ಮುಚ್ಚಿಟ್ಟ ಎಲ್ಲಾ ಸತ್ಯಗಳು ಈ ನಾಟಕದ ಮೂಲಕ ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಿದೆ. ಇದು ಆಧುನಿಕ ರಂಗಭೂಮಿಯ ಗೆಲುವು" ಎಂದರು.
"ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದಲ್ಲಿ ನಾಟಕ ಪ್ರದರ್ಶನ ಜ.27ರಿಂದ ಫೆ.15ರವರೆಗೆ 2ನೇ ಹಂತದಲ್ಲಿ ಪ್ರಾರಂಭಿಸಲಾಗಿದೆ. ಜ.27ರಂದು ಹುಬ್ಬಳ್ಳಿ, 29ರಂದು ಧಾರವಾಡ, 31ರಂದು ಬೆಳಗಾವಿ, ಫೆ.2ರಂದು ವಿಜಯಪುರ, 5ರಂದು ಬಾಗಲಕೋಟೆ, 8ರಂದು ಬೀದರ್, 9 ಮತ್ತು 10ರಂದು ಕಲಬುರಗಿ, 12ರಂದು ರಾಯಚೂರು, 14ಕ್ಕೆ ಬಳ್ಳಾರಿಯಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಈಗಾಗಲೇ ಈ ಪ್ರದೇಶಗಳಲ್ಲಿ ಬಹುತೇಕ ಟಿಕೆಟ್ಗಳು ಮಾರಾಟವಾಗಿವೆ." ಎಂದು ತಿಳಿಸಿದರು.
ನಾಟಕದ ಕೃತಿ ಮಾರಾಟದಲ್ಲೂ ದಾಖಲೆ: "ಟಿಪ್ಪು ನಿಜಕನಸುಗಳು ನಾಟಕದ ಒಟ್ಟು ನೂರು ಪ್ರದರ್ಶನ ಪೂರೈಸುವ ಗುರಿಯನ್ನು ರಂಗಾಯಣ ಹೊಂದಿದೆ. ಫೆಬ್ರವರಿ ಅಂತ್ಯಕ್ಕೆ 50 ಪ್ರದರ್ಶನಗಳು ಮುಗಿಯಲಿದೆ. ಕೃತಿ ಮಾರಾಟದಲ್ಲೂ ದಾಖಲೆ ಬರೆದಿದೆ. ಈಗಾಗಲೇ 12ನೇ ಆವೃತ್ತಿ ಮುದ್ರಣ ಕಂಡಿದೆ. ಈ ಆವೃತ್ತಿಯನ್ನು ರಾಜ್ಯದ ಮಾಜಿ ಸಚಿವ, ಶಾಸಕ ಸಿ.ಟಿ.ರವಿ ಧಾರವಾಡದಲ್ಲಿ ಬಿಡುಗಡೆ ಮಾಡಿದ್ದಾರೆ" ಎಂದು ಅಡ್ಡಂಡ ಸಿ.ಕಾರ್ಯಪ್ಪ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.