ಮೈಸೂರು: ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಮೈಸೂರು ಮಹಾನಗರ ಪಾಲಿಕೆ ತೆರಿಗೆ ಸಂಗ್ರಹಿಸುವುದಕ್ಕೆ ವಿನೂತನ ಕ್ರಮವೊಂದನ್ನು ಕೈಗೊಂಡಿದೆ.
ಕೊರೊನಾದಿಂದಾಗಿ ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ತಲುಪಲು ಮೈಸೂರು ಮಹಾನಗರ ಪಾಲಿಕೆಗೆ ಸಾಧ್ಯವಾಗಿಲ್ಲ. ಇದರಿಂದ ಅಭಿವೃದ್ಧಿ ಕೆಲಸಗಳಿಗೆ ತೊಂದರೆಯಾದ ಕಾರಣ ತೆರಿಗೆ ಸಂಗ್ರಹಕ್ಕೆ ಹೊಸ ಕ್ರಮ ಕೈಗೊಂಡಿದೆ. ಮೇಯರ್, ಉಪ ಮೇಯರ್, ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಜೊತೆಯಾಗಿ ತೆರಿಗೆ ಸಂಗ್ರಹಕ್ಕೆ ಮುಂದಾಗಿ ಎಲ್ಲರೂ ಪ್ರತ್ಯೇಕ ತಂಡಗಳಾಗಿ ಮನೆಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಅಂಗಡಿಗಳಿಗೆ ತೆರಳಿ ಬಾಕಿ ತೆರಿಗೆ ವಸೂಲಿ ಮಾಡಲಿದ್ದಾರೆ.
ಪಾಲಿಕೆಯ ವಿವಿಧ ವಲಯಗಳ ಎಂಜಿನಿಯರ್ಗಳು, ರೆವಿನ್ಯೂ ಇನ್ಸ್ಪೆಕ್ಟರ್ ಮತ್ತು ಪಾಲಿಕೆಯ ಸದಸ್ಯರು ತೆರಿಗೆ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಳ್ಳಿದ್ದಾರೆ. ಇಂದಿನಿಂದ 15 ದಿನಗಳವರೆಗೆ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಅಭಿಯಾನ ನಡೆಯಲಿದೆ.
ಈ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ಸಹ ಪಡೆಯಲಾಗಿದೆ. ದೇವರಾಜ ಅರಸು ರಸ್ತೆ ಸೇರಿದಂತೆ ಪ್ರಮುಖ ವಾಣಿಜ್ಯ ಕೇಂದ್ರಗಳಿಗೆ ಮೇಯರ್ ತಸ್ನೀಂ, ಉಪ ಮೇಯರ್ ಹಾಗೂ ಆಯುಕ್ತರನ್ನೊಳಗೊಂಡ ತಂಡ ಭೇಟಿ ನೀಡಲಿದೆ. ಇತರ ಕಡೆಗಳಲ್ಲಿ ಅಧಿಕಾರಿಗಳ ಜೊತೆ ಪಾಲಿಕೆ ಸದಸ್ಯರು ಭೇಟಿ ನೀಡುತ್ತಾರೆ. ಬಾಕಿ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಗಮನ ನೀಡಲಾಗಿದೆ ಎಂದು ಮೇಯರ್ ತಸ್ನೀಂ ತಿಳಿಸಿದ್ದಾರೆ.