ಮೈಸೂರು: ಭಿಕ್ಷೆ ಬೇಡಿ ಇಲ್ಲವೇ ಅನೈತಿಕ ಚಟುವಟಿಕೆಯಿಂದ ಜೀವನ ಸಾಗಿಸುತ್ತಿದ್ದ ಮಂಗಳಮುಖಿಯರಿಗೆ ಲಾಕ್ಡೌನ್ ಬಿಸಿ ತಟ್ಟಿದೆ. ಇದರಿಂದ ಆಹಾರ ಸಮಸ್ಯೆ ಎದುರಿಸುತ್ತಿದ್ದ ಇವರಿಗೆ ವಿವಿಧ ಸಂಘ_ಸಂಸ್ಥೆಗಳು ನೆರವಿಗೆ ಬಂದಿವೆ.
ನಗರದ ಅಶೋಕಪುರಂನ ಆಶೋದಯ ಸಮಿತಿ ಕಚೇರಿ ಆವರಣದಲ್ಲಿ ರೋಟರಿ ಸಂಸ್ಥೆ, ಜಿಎಸ್ಎಸ್ ಜಂಟಿಯಾಗಿ 20 ದಿನಗಳವರೆಗೆ ಬೇಕಾಗುವಷ್ಟು ಆಹಾರದ ಕಿಟ್ ಅನ್ನು ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಹಸ್ತಾಂತರಿಸಿದರು.
ಅಸಹಾಯಕರಿಗೆ, ನಿರ್ಗತಿಕರಿಗೆ ಸಹಾಯ ಹಸ್ತ ನೀಡಬೇಕು. ಮಂಗಳಮುಖಿಯರಿಗೆ ಆರ್ಥಿಕ ಸಮಸ್ಯೆ ಕಾಡುತ್ತಿದ್ದರಿಂದ ಈ ಸಂದರ್ಭದಲ್ಲಿ ನೆರವು ನೀಡಬೇಕು ಎಂದು ಶಾಸಕ ರಾಮದಾಸ್ ವಿನಂತಿಸಿಕೊಂಡರು.