ಮೈಸೂರು: ಕೇಂದ್ರ ಸಚಿವ ಸದಾನಂದಗೌಡ ನ್ಯಾಯಾಧೀಶರ ಬಗ್ಗೆ ಹೇಳಿರುವ ಹೇಳಿಕೆ ಹಾಗೂ ಬಳಸಿರುವ ಪದ ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಇಂದು ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ವಿಶ್ವನಾಥ್, ಸದಾನಂದಗೌಡ ಕೇಂದ್ರ ಸಚಿವರು, ಇವರು ನೇಣು ಹಾಕಿಕೊಳ್ಳಬೇಕು ಎಂಬ ಹೇಳಿಕೆ ಸರ್ಕಾರ ನೇಣು ಹಾಕಿಕೊಂಡಂತೆ ಆಯಿತು. ಇದಕ್ಕೆ ಜನರೇ ಉತ್ತರ ನೀಡಬೇಕು ಎಂದ್ರು.
ಇಡೀ ದೇಶದಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಮತ್ತು ಪತ್ರಿಕಾರಂಗ ನಾವೇ ಮಾಡಿಕೊಂಡಿರುವ ವ್ಯವಸ್ಥೆಗಳಾಗಿದ್ದು, ಈ ವ್ಯವಸ್ಥೆಯನ್ನು ಯಾಕೋ ನಾವು ಮೀರುತ್ತಿದ್ದೇವೆ ಅನಿಸುತ್ತದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವ ಅಧಿಕಾರವಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸಚಿವ ಸದಾನಂದಗೌಡ ಹಾಗೂ ಸಿ.ಟಿ.ರವಿ ಹೇಳಿಕೆ ಸರಿಯಲ್ಲ. ವ್ಯವಸ್ಥೆಗಳನ್ನು ಸರಿಪಡಿಸುವಲ್ಲಿ ಸರ್ಕಾರ ಮೈ ಮರೆತಾಗ ಎಚ್ಚರಿಸುವ ಅಧಿಕಾರ ನ್ಯಾಯಾಲಯಕ್ಕೆ ಇದೆ ಎಂದು ಹಳ್ಳಿಹಕ್ಕಿ ವಿಶ್ವನಾಥ್ ಹೇಳಿದರು.
ಚಾಮರಾಜನಗರ ದುರಂತಕ್ಕೂ ಮೈಸೂರು ಜಿಲ್ಲಾಡಳಿತಕ್ಕೂ ಸಂಬಂಧಗಳಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆದರೆ ಈ ತನಿಖೆಯನ್ನು ಅಧಿಕಾರಿಗಳು ಮಾಡಿದ್ದರೆ ಸತ್ತವರು 3 ಜನ, ಈ ಘಟನೆಗೆ ಮೈಸೂರು ಕಾರಣ ಹಾಗೂ ಚಾಮರಾಜನಗರವೂ ಕಾರಣ ಎಂದು ವರದಿ ಕೊಡುತ್ತಿದ್ದರು. ಆದರೆ ನ್ಯಾಯಾಧೀಶರು ತನಿಖೆ ಮಾಡಿದ್ದರಿಂದ ಮೈಸೂರು ಈಗ ಕಳಂಕ ಮುಕ್ತವಾಗಿದೆ ಎಂದ್ರು.
ಕೂಡಲೇ ಚಾಮರಾಜನಗರ ದುರಂತದಲ್ಲಿ ಸತ್ತವರಿಗೆ ಪರಿಹಾರ ನೀಡಬೇಕೆಂದು ಕೋರ್ಟ್ ಹೇಳಿದೆ. ನಾನು ಸಹ ಅದನ್ನೇ ಹೇಳುತ್ತಿದ್ದೇನೆ ಎಂದ ಹೆಚ್.ವಿಶ್ವನಾಥ್, ಕೋವಿಡ್ ವಿಚಾರದಲ್ಲಿ ಜನರಿಗೆ ಜಾಗೃತಿ ಮೂಡಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ವಿಫಲವಾಗಿವೆ ಎಂದು ಆರೋಪಿಸಿದ್ರು.