ಮೈಸೂರು : ನಗರದ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಗೆ 282 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಸಿಎಂ ಕುಮಾರಸ್ವಾಮಿ ಅನುಮತಿ ನೀಡಿದ್ದರು. ಇದಕ್ಕಾಗಿ ಸಿಎಂ ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಡಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಬೆಂಗಳೂರು-ಮೈಸೂರು ನಡುವಿನ ವಿಮಾನ ಹಾರಾಟಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಪ್ರತಾಪ್ ಸಿಂಹ, ವಿಮಾನ ನಿಲ್ದಾಣದ ಅಭಿವೃದ್ಧಿ 282 ಎಕರೆ ಭೂಮಿ ನೀಡಿದ ಸಿಎಂ, ವಿಮಾನದ ಇಂಧನಕ್ಕೆ ಇದ್ದ 29% ತೆರಿಗೆಯನ್ನು 4% ಕ್ಕೆ ಇಳಿಸಿದರು ಎಂದು ಹೇಳಿದರು.
ನಾನು ಕಳೆದ ಬಾರಿ ಸಂಸದನಾದ ಸಂದರ್ಭದಲ್ಲಿ ಈ ವಿಮಾನ ನಿಲ್ದಾಣದಿಂದ ಯಾವುದೇ ವಿಮಾನಗಳು ಹಾರಾಟ ನಡೆಸುತ್ತಿರಲಿಲ್ಲ. ಆದರೆ ಉಡಾನ್ ಯೋಜನೆಯಿಂದ ಕಳೆದ ವರ್ಷ ಬೆಂಗಳೂರು ಮತ್ತು ಚೆನ್ನೈ ಗೆ ವಿಮಾನ ಸೇವೆಯನ್ನು ಆರಂಭಿಸಿದ್ದೇವು.
ಈ ಬಾರಿ ಮೈಸೂರು ವಿಮಾನ ನಿಲ್ದಾಣದಿಂದ ಮೈಸೂರು ಟು ಬೆಂಗಳೂರು, ವಿಜಯವಾಡಕ್ಕೆ ವಿಮಾನ ಸೇವೆ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಹೈದರಾಬಾದ್, ಕೊಚ್ಚಿನ್ ಗೆ ಈ ಸೇವೆಯನ್ನು ವಿಸ್ತರಿಸುತ್ತೇವೆ ಎಂದು ಹೇಳಿದರು.