ಮೈಸೂರು: ನಮ್ಮ ರಾಜ್ಯದ ಹಣ ಬೇರೆ ರಾಜ್ಯದವರ ಪಾಲಾಗುತ್ತಿದೆ. ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಶಾಸಕ ಸಾ.ರಾ.ಮಹೇಶ್ ಮತ್ತೊಮ್ಮೆ ಮೈಸೂರಿನ ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ನೇರ ಆರೋಪ ಮಾಡಿ ಸಂಬಂಧಪಟ್ಟ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ, ಹಾಲಿ ಕೆ.ಆರ್.ನಗರ ಕ್ಷೇತ್ರದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್, ಆಂಧ್ರ ಪ್ರದೇಶದ ತಿರುಪತಿಯಲ್ಲಿ ಮೈಸೂರಿನ ಮಹಾರಾಜರು ಅಂದು ಕರ್ನಾಟಕ ಸರ್ಕಾರಕ್ಕೆ ನೀಡಿದ 7.05 ಎಕರೆ ಜಾಗದಲ್ಲಿ ವಿಶಾಲವಾದ ಸಂಕೀರ್ಣ ನಿರ್ಮಿಸಲು ರಾಜ್ಯ ಸರ್ಕಾರ 200 ಕೋಟಿ ಹಣ ಬಿಡುಗಡೆ ಮಾಡಿದೆ.
ಈ ಕಟ್ಟಡ ಕಾಮಗಾರಿ ನಿರ್ಮಾಣ ಮತ್ತು ನಿರ್ವಹಣೆಯನ್ನು ಟಿಟಿಡಿ ವಹಿಸಿದೆ. ಇದರ ಜೊತೆಗೆ ಆರ್ಕಿಟೆಕ್, ಲ್ಯಾಂಡ್ ಇನಿಟಿರಿಯಲ್ ವಿನ್ಯಾಸದ ಕೆಲಸವನ್ನು ಮೈ.ಗಾಯತ್ರಿ ಅಂಡ್ ನಮಿತ್ ಆರ್ಕಿಟೆಕ್ ಅವರಿಗೆ ನೀಡಲಾಗಿದೆ. ಇದಕ್ಕಾಗಿಯೇ 10 ಕೋಟಿ ರೂ. ನೀಡಲಾಗಿದ್ದು, ಪಾರದರ್ಶಕ ಕಾಯ್ದೆ 1998ರ ಅನ್ವಯ ವಿನಾಯಿತಿ ನೀಡಲಾಗಿದೆ. ಇದರ ಹಿಂದೆ ಅಂದಿನ ಮುಜರಾಯಿ ಇಲಾಖೆಯ ಆಯುಕ್ತರಾಗಿದ್ದ ಈಗಿನ ಮೈಸೂರು ಜಿಲ್ಲಾಧಿಕಾರಿಯಾಗಿರುವ ರೋಹಿಣಿ ಸಿಂಧೂರಿ ಅವರ ಪಾತ್ರ ಇದೆ ಎಂದು ಆರೋಪಿಸಿದ ಶಾಸಕ ಸಾ.ರಾ.ಮಹೇಶ್, ಹಾಗಾದರೆ ಈ 10 ಕೋಟಿ ಹಣ ಎಲ್ಲಿಗೆ ಹೋಗಿದೆ? ಇದರಲ್ಲಿ ಯಾರ ಕೈವಾಡ ಇದೆ ಎಂಬುದರ ಬಗ್ಗೆ ತನಿಖೆ ಮಾಡಬೇಕೆಂದು ಒತ್ತಾಯಿಸಿದರು.
ಮಹಾಮಸ್ತಾಕಾಭಿಷೇಕ ಕಾಮಗಾರಿಗಾಗಿ 175 ಕೋಟಿ ಹಣ ಬಿಡುಗಡೆಯಾಗಿತ್ತು. ಆಗ ರೋಹಿಣಿ ಸಿಂಧೂರಿ ಅವರು ಹಾಸನದ ಜಿಲ್ಲಾಧಿಕಾರಿಯಾಗಿದ್ದರು. ಆ ಸಂದರ್ಭದಲ್ಲಿ ನಡೆದ ಹಗರಣದ ದಾಖಲೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿ ಈಗ ವರ್ಗಾವಣೆ ದಂಧೆಯೇ ನಡೆಯುತ್ತಿದೆ. ಒಂದು ವರ್ಷಕ್ಕೆ ಒಬ್ಬ ಇನ್ಸ್ಪೆಕ್ಟರ್ ಒಂದು ಕಡೆಯಿಂದ ಮತ್ತೊಂದು ಕಡೆಗೆ ವರ್ಗಾವಣೆ ಆಗಬೇಕಾದರೆ 20 ಲಕ್ಷ ರೂ. ಲಂಚ ನೀಡಬೇಕು ಎಂದು ನನ್ನ ಬಳಿಯೇ ಬಂದು ಹೇಳುತ್ತಾರೆ. ಇನ್ನು ನಾವು ಯಾವ ರೀತಿ ಕೆಲಸ ಮಾಡಬೇಕು ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಈ ರೀತಿಯಲ್ಲಿ ಕರ್ನಾಟಕದಲ್ಲಿ ಈ ಸರ್ಕಾರದಲ್ಲಿ ವರ್ಗಾವಣೆ ದಂಧೆಯೇ ನಡೆಯುತ್ತಿದೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದರು.