ಮೈಸೂರು: ಬಸ್ ನಿಲ್ದಾಣಗಳಲ್ಲಿ ಹೊಂಚು ಹಾಕಿ ಪ್ರಯಾಣಿಕರ ಲಗೇಜ್ ಬ್ಯಾಗ್ ಕದಿಯುತ್ತಿದ್ದ ಕಳ್ಳನನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸಿದ್ದು, ಆತನಿಂದ 13,85,000 ರೂ. ಮೌಲ್ಯದ 277 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮೊಹಮ್ಮದ್ ಇಮ್ರಾನ್ (37) ಬಂಧಿತ ಆರೋಪಿ. ಈತ ಕೊಡಗು ಜಿಲ್ಲೆಯವನಾಗಿದ್ದು, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡುತ್ತಿದ್ದ. ಮಹಿಳೆಯೊಬ್ಬರು ಜನವರಿ 16ರಂದು ರಾಮನಗರದಿಂದ ಮಡಿಕೇರಿಗೆ ಬಸ್ನಲ್ಲಿ ಹೋಗುತ್ತಿದ್ದಾಗ ಆಕೆಯ ಬ್ಯಾಗ್ ಕಳ್ಳತನವಾಗಿತ್ತು. ಈ ಕುರಿತು ಮಹಿಳೆ ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಸೆ. 15ರಂದು ಮೈಸೂರು ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಈತನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ, ಈತ ಬಸ್ ನಿಲ್ದಾಣಗಳಲ್ಲಿ ಲಗೇಜ್ ಬ್ಯಾಗ್ ಮತ್ತು ಪರ್ಸ್ ಕದಿಯುತ್ತಿದ್ದ ಎಂದು ತಿಳಿದು ಬಂದಿದೆ.
ಪೊಲೀಸರು 13,85,000 ರೂ. ಮೌಲ್ಯದ 277 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.