ಮೈಸೂರು: ಪ್ರದೇಶ ಕುರುಬರ ಸಂಘ ಇಂದು ನಿನ್ನೆಯದಲ್ಲ. ಅದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಸಂಘ ಉದಯಿಸಿದ ಮೇಲೆ ಕಾಗಿನೆಲೆ ಮಠ ಕಟ್ಟಿದ್ದು ಎಂದು ಕುರುಬರ ಸಂಘದ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ, ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ಗೆ ತಿರುಗೇಟು ನೀಡಿದ್ದಾರೆ.
ಕುಲಗುರುಗಳಿಗಿಂತ ಕುರುಬರ ಸಂಘ ದೊಡ್ಡದಾ ಎಂದು ಹೆಚ್.ವಿಶ್ವನಾಥ್ ಹೇಳಿಕೆ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುಬ್ರಮಣ್ಯ, ಕಾಗಿನೆಲೆ ಮಠ ಆರಂಭಕ್ಕೂ ಮುನ್ನ ಕುರುಬರ ಸಂಘವೇ ಪ್ರಮುಖವಾಗಿತ್ತು. ಶೀಘ್ರದಲ್ಲಿ ಸಂಘದ ಶತಮಾನೋತ್ಸವ ಆಚರಣೆ ಮಾಡಲಿದ್ದೇವೆ. ಸಂಘ ರಚನೆಯಾದ ಮೇಲೆ 1992ರಲ್ಲಿ ಮಠ ಕಟ್ಟಿದ್ದು. ಕಾಗಿನೆಲೆ ಮಠ ಹಾಗೂ ಕುರುಬರ ಸಂಘ ಸಮುದಾಯದ ಕಣ್ಣುಗಳಿದ್ದಂತೆ ಎಂದು ಹೇಳಿದರು.
ರಾಜ್ಯದಲ್ಲಿ ಅಹಿಂದ ಹೋರಾಟದ ಅವಶ್ಯಕತೆ ಇದೆ. ಇತ್ತೀಚೆಗೆ ಅಹಿಂದ ವರ್ಗಕ್ಕೆ ತುಂಬಾ ಅನ್ಯಾಯವಾಗುತ್ತಿದೆ. ಅನ್ಯಾಯದ ವಿರುದ್ಧ ಅಹಿಂದ ಶಕ್ತಿಯುತವಾಗಿದೆ ಎಂದು ತೋರಿಸಬೇಕಿದೆ ಎಂದರು.
ಮಾರ್ಚ್ 13ರಂದು ಕಲಬುರಗಿಯಲ್ಲಿ ಕುರುಬರ ಹಕ್ಕನ್ನು ಕಸಿಯುತ್ತಿರುವ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಈಗಾಗಲೇ ಎಸ್ಟಿಗೆ ಸೇರಿರುವ ಗೊಂಡ, ರಾಜಗೊಂಡ, ಜೇನುಕುರುಬ, ಕಾಡು ಕುರುಬರಿಗೆ ಜಾತಿ ಸಿಂಧುತ್ವ ಪ್ರಮಾಣಪತ್ರ ಪಡೆಯಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ವರದಿ ಪಡೆದು ಜಾತಿ ಪ್ರಮಾಣಪತ್ರ ಪಡೆಯುವಂತೆ ಸರ್ಕಾರ ಆದೇಶ ಮಾಡಿದೆ. ಇದರಿಂದ ಕುರುಬರಿಗೆ ಅನ್ಯಾಯವಾಗಲಿದೆ. ಎಸ್ಟಿ ಸಮುದಾಯಕ್ಕೆ 51 ಜಾತಿಗಳು ಸೇರಿವೆ. ಆದರೆ ಕುರುಬ ಜನಾಂಗದ ಸಮುದಾಯಕ್ಕೆ ಮಾತ್ರ ಯಾಕೆ ಆದೇಶ ಎಂದು ಪ್ರಶ್ನಿಸಿದರು.