ಮೈಸೂರು: ಬೇರೆ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದ ಪೊಲೀಸರು ನಂಬರ್ 1 ಆಗಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೊಲೆ ಆರೋಪಿಗಳನ್ನು ಬಂಧಿಸಿದ್ದೇ ಕರ್ನಾಟಕ ಪೊಲೀಸರು. ನಮ್ಮ ಪೊಲೀಸ್ ಇಲಾಖೆ ದೇಶದಲ್ಲಿಯೇ ಮಾದರಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಇಲ್ಲಿನ ಪೊಲೀಸ್ ಅಕಾಡೆಮಿಯಲ್ಲಿ ಡಿವೈಎಸ್ಪಿ ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬ್ಯಾಚ್ನ ಪ್ರಶಿಕ್ಷಣಾರ್ಥಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಯಾವುದೇ ರಾಜ್ಯಕ್ಕೆ ಹೋಗಲಿ ಕರ್ನಾಟಕ ಪೊಲೀಸ್ ಬಗ್ಗೆ ಅಭಿಮಾನ ಹಾಗೂ ಮಾದರಿಯಾಗಿ ಹೇಳಲಾಗುತ್ತದೆ ಎಂದು ಅಭಿಮಾನ ವ್ಯಕ್ತಪಡಿಸಿದರು.
![karnataka police are number one says st somashekhar](https://etvbharatimages.akamaized.net/etvbharat/prod-images/kn-mys-05-minstar-stsomasakar-news-7208092_23022021201710_2302f_1614091630_507.jpg)
ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕರಾದ ವಿಪುಲ್ ಕುಮಾರ್ ಅವರು ಸಮರ್ಥ ಹಾಗೂ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ಅಕಾಡೆಮಿಯಲ್ಲಿ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತಿದೆ. ಸ್ವಚ್ಛತೆಯನ್ನು ಕಾಯ್ದುಕೊಳ್ಳಲಾಗಿದೆ. ಆಸ್ಪತ್ರೆ, ಜಿಮ್, ಮೈದಾನ ಸೇರಿದಂತೆ ಇನ್ನಿತರ ವಿಭಾಗಗಳನ್ನು ಗಮನಿಸಿದ್ದು, ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಸಚಿವರು ಶ್ಲಾಘನೆ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ನಾನು ಕಳೆದ ಒಂದು ವರ್ಷದಿಂದ ಸಂಚರಿಸುತ್ತಿದ್ದೇನೆ. ಇದುವರೆಗೆ ಒಂದು ಸಣ್ಣ ಗಲಾಟೆ ಸಹ ಆಗಿಲ್ಲ. ಕೋವಿಡ್ ಸಂದರ್ಭದಲ್ಲಿಯೂ ಉತ್ತಮವಾಗಿ ಪೊಲೀಸರು ಕಾರ್ಯನಿರ್ವಹಣೆ ಮಾಡಿದ್ದಾರೆ. ಇಂದು ರಾಜ್ಯದ ಜನ ರಾತ್ರಿ ನೆಮ್ಮದಿಯಾಗಿ ಮಲಗುತ್ತಿದ್ದಾರೆಂದರೆ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಇದರಲ್ಲಿ ನೂತನ ಪೊಲೀಸರ ಜವಾಬ್ದಾರಿ ಹೆಚ್ಚಿದೆ ಎಂದರು.
![karnataka police are number one says st somashekhar](https://etvbharatimages.akamaized.net/etvbharat/prod-images/kn-mys-05-minstar-stsomasakar-news-7208092_23022021201710_2302f_1614091630_272.jpg)
ಪೊಲೀಸರು ಉತ್ತಮ ತರಬೇತಿ ಪಡೆಯಬೇಕು. ಜೊತೆಗೆ ಮೈಸೂರಿನಲ್ಲಿ ಸುಸಜ್ಜಿತ ಗ್ರಂಥಾಲಯವಿದೆ. ಕೆಲವೊಂದು ಮಹತ್ವದ ತೀರ್ಪುಗಳ ಪ್ರತಿಗಳು ಸಿಗಲಿವೆ. ಇಂಥವುಗಳನ್ನು ಅಭ್ಯಾಸ ಮಾಡಬೇಕು. ಯಾವುದೇ ಒಂದು ಪ್ರಕರಣ ಇರಲಿ, ಅದರ ಸಂಪೂರ್ಣ ಆಯಾಮದಲ್ಲಿ ತನಿಖೆ ನಡೆಸಬೇಕಿದೆ. ನೀವು ದಕ್ಷ, ಪ್ರಾಮಾಣಿಕ ಅಧಿಕಾರಿಯಾದರೆ ಜನರು ಅಭಿಮಾನಿಸುವುದರ ಜೊತೆಗೆ ಕ್ರಿಮಿನಲ್ಗಳು ಹೆದರುತ್ತಾರೆ ಎಂದು ಹೇಳಿದರು.