ಬೆಂಗಳೂರು: ಏರೋ ಇಂಡಿಯೋ ಶೋ ಕೇವಲ ಜಾಗತಿಕ ರಕ್ಷಣಾ ವಲಯದಲ್ಲಿ ಕೊಳ್ಳುವ ಮತ್ತು ಮಾರಾಟಗಾರರ ಸಂಬಂಧಗಳಿಗೆ ಸೀಮಿತವಾಗಿಲ್ಲ. ಅದಕ್ಕೂ ಮೀರಿ ಸಂಶೋಧನೆ ಮತ್ತು ಅಭಿವೃದ್ಧಿ, ಉತ್ಪಾದನೆ ಪರಿವರ್ತನೆ ಹೊಂದಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಯಲಹಂಕದ ವಾಯು ನೆಲೆಯಲ್ಲಿ ಸಾಗುತ್ತಿರುವ ಏರೋ ಇಂಡಿಯಾ 15ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದ ಅವರು, ಏರೋಶೋ ಸಂಬಂಧವೂ ಕೇವಲ ವಹಿವಾಟಿನ ಮಟ್ಟದಲ್ಲಿದೆ. ನಾವು ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನೆ ಗುರಿ ಜೊತೆಗೆ ಸಹಯೋಗವನ್ನು ಮಾಡಬೇಕಿದೆ ಎಂದರು
ಈ ಬಾರಿಯ ಏರೋಶೋದಲ್ಲಿ ವೈಮಾನಿಕ ಸಂಸ್ಥೆಗಳು ಮತ್ತು ಮಿಲಿಟರಿ ಸಾಮರ್ಥ್ಯಗಳ ಪ್ರದರ್ಶನದ ಜೊತೆಗೆ ಹಲವು ಪ್ರಮುಖ ಘೋಷಣೆ ಮತ್ತು ಸಹಭಾಗಿತ್ವಗಳು ನಡೆಯಲಿದೆ. ನಾಲ್ಕುದಿನಗಳ ಕಾಲ ಸಾಗುವ ಈ ಶೋದಲ್ಲಿ 450 ದೇಶಿಯ ಮತ್ತು 50ಕ್ಕೂ ಹೆಚ್ಚು ವಿದೇಶಿ ವಿಮಾನಗಳ ಸಾಮರ್ಥ್ಯ ಪ್ರದರ್ಶನ ನಡೆಸಲಿದೆ.
ಏರೋ ಇಂಡಿಯಾವೂ ಭಾರತದ ವೈಮಾನಿಕ ಮತ್ತು ರಕ್ಷಣಾ ವಲಯದಲ್ಲಿ ಬಲವಾದ ಬೆಳವಣಿಗೆಯನ್ನು ತೋರಿಸುತ್ತಿದೆ. ಇದರ ಪ್ರಮುಖ ಉದ್ದೇಶಗಳಲ್ಲಿ ಒಂದು ರಕ್ಷಣಾ ಸಹಯೋಗ, ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ಅಂತಾರಾಷ್ಟ್ರೀಯ ಸಹಭಾಗಿತ್ವದಲ್ಲಿ ಬಲಗೊಳಿಸುವುದು ಇದರ ಪ್ರಮುಖ ಧ್ಯೇಯವಾಗಿದೆ.
ಲಕ್ಷಾಂತರ ಅವಕಾಶಗಳಿಗೆ ಇದು ವೇದಿಕೆ: ವೈಮಾನಿಕ ಮತ್ತು ರಕ್ಷಣಾ ವಲಯದಲ್ಲಿನ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವ ಜೊತೆಗೆ ಲಕ್ಷಾಂತರ ಅವಕಾಶಗಳಿಗೆ ಇದು ವೇದಿಕೆಯಾಗಲಿದೆ. ಭಾರತವೂ ತಾಂತ್ರಿಕ ಸುಧಾರಣೆ ಮತ್ತು ರಕ್ಷಣಾ ಉತ್ಪಾದನೆಯಲ್ಲಿ ಜಾಗತಿಕ ಪ್ರಾಬಲ್ಯ ಸಾಧಿಸುತ್ತ ಬದ್ಧತೆ ಹೊಂದಿದೆ. ವಿದೇಶಗಳೊಂದಿಗೆ ನಮ್ಮ ಸಂಬಂಧವು ಪರಸ್ಪರ ಪ್ರಯೋಜನ ಮತ್ತು ಶಾಂತಿಯ ಭರವಸೆಯೊಂದಿಗೆ ವೇಗವಾಗಿ ಬೆಳವಣಿಗೆ ಕಾಣುತ್ತಿದೆ.
ಎರಡು ವರ್ಷಕ್ಕೆ ಒಮ್ಮೆ ನಡೆಯುವ ಏರೋ ಇಂಡಿಯಾ ಪ್ರದರ್ಶನವೂ ನಿರ್ಣಾಯಕ ಸಹಯೋಗಗಳಿಗೆ ದಾರಿ ಮಾಡಿಕೊಡುತ್ತದೆ. ರಾಷ್ಟ್ರದ ವೇಗದ ಅಭಿವೃದ್ಧಿಯೊಂದಿಗೆ ಹೊಂದಿಕೊಳ್ಳುವ ದೃಢವಾದ ರಕ್ಷಣಾ ಪರಿಸರ ವ್ಯವಸ್ಥೆಯೊಂದಿಗೆ ಭಾರತದ ಪರಿವರ್ತನೆಯ ಹಂತಕ್ಕೆ ಸಾಕ್ಷಿಯಾಗಿದೆ ಎಂದು ಒತ್ತಿ ಹೇಳಿದರು.
ಸ್ವಾವಲಂಬನೆಯಾಗುವತ್ತ ಭಾರತ: ಭಾರತದ ರಕ್ಷಣಾ ಬಜೆಟ್ನಲ್ಲಿ ಭಾರೀ ಏರಿಕೆ ಕುರಿತು ಮಾತನಾಡಿದ ಅವರು, ಕಳೆದ 10 ವರ್ಷದಲ್ಲಿ ಬಜೆಟ್ ಹಂಚಿಕೆಯಲ್ಲಿ ಒಂದೇ ವರ್ಷದಲ್ಲಿ 9.3ರಷ್ಟು ಅಂದರೆ 6.18 ಲಕ್ಷ ಕೋಟಿ ಏರಿಕೆ ಕಂಡಿದೆ. ಶೇ 80ರಷ್ಟು ರಕ್ಷಣಾ ಉತ್ಪಾದನೆಯು ದೇಶಿಯವಾಗಿ ನಡೆಯುತ್ತಿದ್ದು, ಇದು ಭಾರತ ಸ್ವಾವಲಂಬನೆಯಾಗುವತ್ತ ಬಲಗೊಳ್ಳುತ್ತಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಇದೀಗ ಟಾಟಾ ಅಡ್ವಾನ್ಸ್ ಸಿಸ್ಟಂ ಜೊತೆಗೆ ಜಂಟಿ ಸಹಯೋಗಕ್ಕೆ ಮುಂದಾಗಿದ್ದು, 295 ವಿವಿಧ ರಕ್ಷಣಾ ಸಾಧನ ಬಿಡಿಭಾಗಗಳ ಅವಿಷ್ಕಾರಕ್ಕೆ ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ , ಭಾರತದ ರಕ್ಷಣಾ ವಲಯವೂ ಕೇವಲ ಅಗತ್ಯ ವಲಯ ಎಂಬುದಾಗಿ ಕಂಡಿಲ್ಲ. ಬದಲಾಗಿ ಇದು ದೇಶದ ಅಭಿವೃದ್ಧಿಗೆ ಪ್ರಮುಖ ಕೊಡುಗೆದಾರ ಎಂದು ಇದೀಗ ಗುರುತಿಸಿಕೊಳ್ಳುತ್ತಿದೆ ಎಂದರು. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಏರೋ ಇಂಡಿಯಾ ಕೇವಲ ಪ್ರದರ್ಶನವಲ್ಲ. ಇದು ಭಾರತದ ವೈಮಾನಿಕ ಶಕ್ತಿಯ ಬೆಳವಣಿಗೆ ಮತ್ತು ಅಂತಾರಾಷ್ಟ್ರೀಯ ಸಹಭಾಗಿತ್ವ ಹೊಂದುವ ವೇದಿಕೆಯಾಗಿದೆ ಎಂದರು.
ಏರೋ ಶೋದಲ್ಲಿ ರಾಜ್ಯದಲ್ಲಿ ಸತತವಾಗಿ ನಡೆಸುತ್ತಿರುವ ಹೆಮ್ಮೆಯ ಕುರಿತು ಮಾತನಾಡಿದ ಅವರು, 2013ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಏರೋಸ್ಪೇಸ್ ನೀತಿಯನ್ನು ಪರಿಚಯಿಸಲಾಯಿತು. ಇದಕ್ಕಾಗಿ ದೇವನಹಳ್ಳಿಯಲ್ಲಿ 1,000 ಏಕರೆ ವೈಮಾನಿಕ ಪಾರ್ಕ್ ಸ್ಥಾಪಿಸಲಾಯಿತು. ಭಾರತದ ವೈಮಾನಿಕ ಅಭಿವೃದ್ಧಿಯ ಜೊತೆಗೆ ವಿಶ್ವ ಮಟ್ಟದ ಸಂಶೋಧನಾ ಕೇಂದ್ರವಾಗಿ ಬೆಂಗಳೂರು ಬೆಳೆಯುತ್ತಿದೆ.
ತಾಂತ್ರಿಕ ಸಾಮರ್ಥ್ಯ ಮಹಾಕುಂಭ: ಏರೋ ಇಂಡಿಯಾ 2025 ಅನ್ನು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಹೋಲಿಸಿದ ರಾಜನಾಥ್ ಸಿಂಗ್, ಎರಡು ವರ್ಷದ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನವು ಅನಿಶ್ಚಿತತೆಯಿಂದ ಗುರುತಿಸಿರುವ ಜಗತ್ತಿನಲ್ಲಿ ದೇಶದ ಮಣ್ಣಿನ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವ ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಮಹಾಕುಂಭ ಮೇಳವೂ ಧಾರ್ಮಿಕವಾಗಿ ಲಕ್ಷಾಂತರ ಜನರನ್ನು ಒಟ್ಟುಗೂಡಿಸಲಿದೆ. ಈ ವೈಮಾನಿಕ ಕಾರ್ಯಕ್ರಮವೂ ಜಾಗತಿಕ ರಕ್ಷಣಾ ಮತ್ತು ವೈಮಾನಿಕ ಕೊಳ್ಳುಗರು ಮತ್ತು ಮಾರಾಟಗಾರರನ್ನು ಈ ನೆಲದಲ್ಲಿ ಒಂದು ಗೂಡಿಸುತ್ತದೆ. ಏರೋ ಇಂಡಿಯಾವೂ ತಾಂತ್ರಿಕ ಸಾಮರ್ಥ್ಯ ವೈಮಾನಿಕ ಮಹಾಕುಂಭವಾಗಿದೆ ಎಂದರು.
ಇದನ್ನೂ ಓದಿ: ಆಗಸದಲ್ಲಿ ಲೋಹದ ಹಕ್ಕಿಗಳ ಚಮತ್ಕಾರ: ಏರೋ ಇಂಡಿಯಾ - 2025 ಉದ್ಘಾಟನೆಗೆ ಕ್ಷಣಗಣನೆ
ಇದನ್ನೂ ಓದಿ: ಮಹಾಕುಂಭ ಮೇಳಕ್ಕೆ ಹುಬ್ಬಳ್ಳಿಯಿಂದ NWKRTC ವಿಶೇಷ ಬಸ್ ಸೌಲಭ್ಯ