ಮೈಸೂರು: ಸಿಲ್ಕ್ ಫ್ಯಾಕ್ಟರಿ ಗುತ್ತಿಗೆ ನೌಕರರಿಗೆ ನ್ಯಾಯ ಸಿಗಲಿದೆ. ಆದರೆ ನೌಕರರು, ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ನಾರಾಯಣಗೌಡ ಹೇಳಿದರು.
ಗುತ್ತಿಗೆ ನೌಕರರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೌಕರರು ಹಾಗೂ ಗುತ್ತಿಗೆ ನೌಕರರಿಗೆ ಕೊರೊನಾ ಸಂದರ್ಭದಲ್ಲಿ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ರೇಷ್ಮೆ ಕಾರ್ಖಾನೆಯಲ್ಲಿ ಕೆಲಸ ನಿಲ್ಲಿಸಿರಲಿಲ್ಲ. ಅಲ್ಲದೆ ನಷ್ಟ ಆದಾಗಲೂ ಸಂಬಳ ಕೊಡಲಾಗಿದೆ ಎಂದರು.
ಮೈಸೂರು ಸಿಲ್ಕ್ಗೆ ಪ್ರಪಂಚದಾದ್ಯಂತ ಒಳ್ಳೆಯ ಹೆಸರಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮಕ್ಕೆ ಕೊಂಡೊಯ್ಯಲಾಗುವುದು. ನೆರೆ ಹಾವಳಿಯಿಂದ ತತ್ತರಿಸಿರುವ ಸ್ಥಳಕ್ಕೆ ಪ್ರವಾಹ ತಗ್ಗಿದ ನಂತರ ಹೋಗಲಾಗುವುದು ಎಂದರು.