ಮೈಸೂರು: ಜೆಎನ್ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಖಂಡಿಸಿ ಮಾನಸಗಂಗೋತ್ರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ‘ಫ್ರಿ ಕಾಶ್ಮೀರ’ ನಾಮಫಲಕ ಪ್ರದರ್ಶಿಸಿದ ಯುವತಿಯ ಪರ ವಕಾಲತ್ತು ವಹಿಸಲು ಸೋಮವಾರ ಬೆಂಗಳೂರಿನ ವಕೀಲರ ತಂಡ ಮೈಸೂರಿಗೆ ಆಗಮಿಸಲಿದೆ.
![free kashmir nameboard controversy](https://etvbharatimages.akamaized.net/etvbharat/prod-images/5769117_mysore.jpg)
ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಮೇಲೆ ಎಫ್ಐಆರ್ ದಾಖಲಾಗಿದ್ದು, ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸದಿರಲು ಮೈಸೂರು ವಕೀಲರ ಸಂಘ ನಿರ್ಧರಿಸಿದೆ. ಈ ನಡುವೆ ವಕೀಲರ ಸಂಘದ ತೀರ್ಮಾನವನ್ನು ಮರು ಪರಿಶೀಲಿಸುವಂತೆ ಮೈಸೂರಿನ ಪ್ರಗತಿಪರ ಸಂಘಟನೆಗಳು ಪತ್ರ ಬರೆದು ಒತ್ತಾಯಿಸಿದವು. ಈ ಹಿನ್ನೆಲೆಯಲ್ಲಿ ಸೋಮವಾರ(ಜ.20) ಬೆಂಗಳೂರಿನ ವಕೀಲರ ತಂಡ ಜಗದೀಶ್ ಅವರ ನೇತೃತ್ವದಲ್ಲಿ ಫ್ರಿ ಕಾಶ್ಮಿರ ಪ್ರಕರಣದ ಯುವತಿ ನಳಿನಿ ಪರವಾಗಿ ಮಾತನಾಡಲು ಮೈಸೂರಿಗೆ ಆಗಮಿಸುತ್ತಿದ್ದಾರೆ.
ನಿಕಟಪೂರ್ವ ಎಸ್.ಪಿ.ಪಿ.ಯಾಗಿದ್ದ ಹಿರಿಯ ವಕೀಲರಾದ ಬಿ.ಟಿ.ವೆಂಕಟೇಶ್, ಖ್ಯಾತ ಹಾಗೂ ಹಿರಿಯ ಕ್ರಿಮಿನಲ್ ಲಾಯರ್ಗಳಾದ ಶಂಕರಪ್ಪ, ಕಾಶೀನಾಥ್ ಮುಂತಾದವರ ವಕಾಲತ್ತಿನೊಂದಿಗೆ ನಳಿನಿ ಪ್ರಕರಣದಲ್ಲಿ ಸದರಿ ನ್ಯಾಯಾಲಯದಲ್ಲಿ ಹಾಜರಾಗಲಿದ್ದಾರೆ. ದಯವಿಟ್ಟು ನಿಮ್ಮ ನೈತಿಕ ಬೆಂಬಲ ನೀಡಿ ಎಂದು ಹಿರಿಯ ನ್ಯಾಯವಾದಿ ಸಿ.ಎಸ್.ದ್ವಾರಕಾನಾಥ್ ತಮ್ಮ ಫೇಸ್ಬುಕ್ ಖಾತೆಯ ಮೂಲಕ ಮನವಿ ಮಾಡಿದ್ದಾರೆ.