ಮೈಸೂರು: ಇನ್ಮುಂದೆ ಮೂಕ ಪ್ರಾಣಿಗಳು ಅನಾರೋಗ್ಯಕ್ಕೀಡಾದರೆ ಕೂಡಲೇ ಸ್ಥಳಕ್ಕೆ ಹೋಗಿ ಚಿಕಿತ್ಸೆ ನೀಡುವ ಜಾನುವಾರು ಆ್ಯಂಬುಲೆನ್ಸ್ ಸೇವೆ ಆರಂಭವಾಗಿದ್ದು, ಸಚಿವ ಎಸ್.ಟಿ.ಸೋಮಶೇಖರ್ ಇದನ್ನು ಉದ್ಘಾಟಿಸಿದರು.
ಮನುಷ್ಯನ ಆರೋಗ್ಯ ಕೆಟ್ಟರೆ ತಕ್ಷಣ ಆ್ಯಂಬುಲೆನ್ಸ್ಗೆ ಕರೆ ಮಾಡಿದರೆ ಮನೆಯ ಹತ್ತಿರ ಬಂದು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಆದರೆ, ಜಾನುವಾರುಗಳು ಆರೋಗ್ಯ ಸಮಸ್ಯೆಯಿಂದ ನರಳಿ-ನರಳಿ ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಸರ್ಕಾರ ಜಾನುವಾರುಗಳಿಗಾಗಿ ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದೆ.
ಆ್ಯಂಬುಲೆನ್ಸ್ನಲ್ಲಿ ಏನಿರುತ್ತದೆ : ಈ ಆ್ಯಂಬುಲೆನ್ಸ್ನಲ್ಲಿ ಸ್ಯ್ಕಾನಿಂಗ್ ಮಷಿನ್, ಲ್ಯಾಬರೇಟರಿ ಹಾಗೂ ಸ್ಥಳದಲ್ಲೇ ರಕ್ತ ಪರೀಕ್ಷೆ ಮಾಡಿ ಚಿಕಿತ್ಸೆ ಕೊಡುವ ವ್ಯವಸ್ಥೆ ಇದೆ. ಗರ್ಭಿಣಿ ಹಸುಗಳು ಕರು ಹಾಕಲು ತೊಂದರೆಯಾದರೆ, ಅಲ್ಲಿಗೆ ಹೋಗಿ ಚಿಕಿತ್ಸೆ ನೀಡುವ ವ್ಯವಸ್ಥೆ ಕೂಡ ಇದೆ. ಪ್ರಾಯೋಗಿಕವಾಗಿ 15 ಜಿಲ್ಲೆಗಳಲ್ಲಿ ಇದನ್ನು ಜಾರಿ ಮಾಡಲಾಗುತ್ತಿದ್ದು, ಈ ಆ್ಯಂಬುಲೆನ್ಸ್ಗೆ 12 ಲಕ್ಷ ವೆಚ್ಚವಾಗುತ್ತಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ರವಿಕುಮಾರ್ ಹೇಳಿದ್ದಾರೆ.
ಎಲ್ಲ ರೀತಿಯ ಸುಸಜ್ಜಿತ ಚಿಕಿತ್ಸಾ ವ್ಯವಸ್ಥೆಗಳನ್ನೊಳಗೊಂಡ ಆ್ಯಂಬುಲೆನ್ಸ್ ಇದಾಗಿದ್ದು, 1962 ಸಂಖ್ಯೆಗೆ ಕರೆ ಮಾಡಿದರೆ ತಕ್ಷಣ ಮನೆ ಬಾಗಿಲಿಗೆ ಜಾನುವಾರು ಆ್ಯಂಬುಲೆನ್ಸ್ ಬರಲಿದೆ ಎಂದು ಪಶುಸಂಗೋಪನಾ ಇಲಾಖೆ ವೈದ್ಯ ಸುರೇಶ್ ತಿಳಿಸಿದ್ದಾರೆ.