ಮೈಸೂರು: ಒಲೆ ಹೊತ್ತಿಸಲು ಹೋದಾಗ ಬೆಂಕಿ ಅವಘಡ ಸಂಭವಿಸಿ ಗಾಯಗೊಂಡಿದ್ದ ಒಂದೇ ಕುಟುಂಬದ ಮೂವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಪೇದೆ ಮತ್ತು ಅವರ ಮಗ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
ಗುರುವಾರ ಜಿಲ್ಲೆಯ ಕೆ.ಆರ್. ನಗರ ಪಟ್ಟಣದ ಈಶ್ವರ ಬಡಾವಣೆಯಲ್ಲಿ ವಾಸವಿದ್ದ ಪೊಲೀಸ್ ಪೇದೆ ಕುಟುಂಬ ಮನೆಯಲ್ಲಿ ನೀರಿನ ಒಲೆ ಹೊತ್ತಿಸುವಾಗ ಪೇದೆಯ ಹೆಂಡತಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿತ್ತು. ಇವರನ್ನು ರಕ್ಷಿಸಲು ಹೋದ ಪೊಲೀಸ್ ಪೇದೆ ರೇಣುಕಸ್ವಾಮಿ, ಅವರ ಮಗ ತೇಜಸ್ಗೂ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಪೇದೆ ಮತ್ತು ಅವರ ಮಗ ಮೃತಪಟ್ಟಿದ್ದಾರೆ.
ಪೇದೆ ರೇಣುಕಸ್ವಾಮಿ ಅವರ ಪತ್ನಿ ಪುಷ್ಪಲತಾ ಅವರ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಈ ಸಂಬಂಧ ಕೆ.ಆರ್. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.