ಮೈಸೂರು : ಒಂದೂವರೆ ವರ್ಷದ ಮಗನನ್ನು ತಂದೆಯೇ ಕೆರೆಗೆ ಎಸೆದು ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಗ್ರಾಮದಲ್ಲಿ ನಡೆದಿದೆ. ಮಾಕೋಡು ಗ್ರಾಮದ ಗಣೇಶ್ ಎಂಬಾತನೇ ಮಗನನ್ನು ಕೊಂದಿರುವ ಪಾಪಿ ತಂದೆ. ಪ್ರಕರಣ ಸಂಬಂಧ ಪಿರಿಯಾಪಟ್ಟಣ ಪೊಲೀಸರು ಗಣೇಶ್ನನ್ನು ಬಂಧಿಸಿದ್ದಾರೆ.
2014ರಲ್ಲಿ ದೇವನಹಳ್ಳಿ ತಾಲೂಕಿನ ದೊಡ್ಡಸನ್ನೆ ಗ್ರಾಮದ ಲಕ್ಷ್ಮಿ ಎಂಬುವವರನ್ನು ಗಣೇಶ್ ಮದುವೆಯಾಗಿದ್ದ. ಬೆಂಗಳೂರು ಬಳಿಯ ದೇವನಹಳ್ಳಿಯಲ್ಲಿ ದಂಪತಿ ವಾಸವಿದ್ದರು. ಈ ದಂಪತಿಗೆ ಹಾರಿಕಾ ಮತ್ತು ದೀಕ್ಷಾ ಎಂಬ ಇಬ್ಬರು ಪುತ್ರಿಯರು ಇದ್ದರು. ಬಳಿಕ ಲಕ್ಷ್ಮಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿ ಇಹಲೋಕ ತ್ಯಜಿಸಿದರು.
ನಂತರ ಗಣೇಶ್ ದೇವನಹಳ್ಳಿಯಿಂದ ತಮ್ಮ ಸ್ವಗ್ರಾಮ ಪಿರಿಯಾಪಟ್ಟಣದ ಮಾಕೋಡಿಗೆ ಬಂದು ವಾಸಿಸಲು ಆರಂಭಿಸಿದ್ದರು. ಈ ವೇಳೆ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಅತ್ತೆಯ ಬಳಿಯೇ ಬಿಟ್ಟು ಬಂದಿದ್ದರು. ಆದರೆ ಒಂದೂವರೆ ವರ್ಷದ ಮಗನನ್ನು ತನ್ನ ಬಳಿ ಇಟ್ಟುಕೊಂಡಿದ್ದರು. ಈ ವೇಳೆ ಮಗ ತುಂಬಾ ಅಳುತ್ತಿದ್ದ. ಈ ಹಿನ್ನೆಲೆ ಮಗನನ್ನು ಸಾಕಲಾಗದೇ ಕೆರೆಗೆ ಎಸೆದು ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.
ಘಟನೆ ಸಂಬಂಧ ಗಣೇಶ್ ಅವರ ಅತ್ತೆ ಅಂಜನಮ್ಮ ಪಿರಿಯಾಪಟ್ಟಣ ಪೊಲೀಸರಿಗೆ ಗಣೇಶ್ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆ ಪೊಲೀಸರು ಗಣೇಶ್ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗಣೇಶ್, ತನ್ನ ತಾಯಿ ಮತ್ತು ಅತ್ತೆ ಮಗುವನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಅದು ಸದಾ ಅಳುತ್ತಿತ್ತು. ಜೊತೆಗೆ ಅದನ್ನು ಸಾಕಲು ನನಗೆ ಕಷ್ಟ ಆಯಿತು. ಈ ಹಿನ್ನೆಲೆ ಮಗುವನ್ನು ಕೆರೆಗೆ ಎಸೆದು ಕೊಲೆ ಮಾಡಿರುವುದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಮಗುವನ್ನು ಹತ್ಯೆ ಮಾಡಿರುವ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಪೊಲೀಸರು ತನಿಖೆ ನಡೆಸಿ, ಮಗುವಿನ ತಂದೆಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತ್ಯೇಕ ಘಟನೆ - ಒಂದೇ ಕುಟುಂಬದ ಐವರನ್ನು ಕೊಂದ ಮಹಿಳೆಯರ ಬಂಧನ : ಒಂದೇ ಕುಟುಂಬದ ಐವರಿಗೆ ವಿಷ ಹಾಕಿ ಹತ್ಯೆ ಮಾಡಿದ್ದ ಘಟನೆ ಮಹಾರಾಷ್ಟ್ರ ಗಡ್ಚಿರೋಲಿ ಎಂಬಲ್ಲಿ ಇತ್ತೀಚೆಗೆ ನಡೆದಿತ್ತು. ಪ್ರಕರಣ ಸಂಬಂಧ ಇಬ್ಬರು ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ತಿ ವಿವಾದ ಹಿನ್ನೆಲೆ ಈ ಇಬ್ಬರು ಮಹಿಳೆಯರು ವಿಷ ಹಾಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಸಂಘಮಿತ್ರ ಕುಂಬಾರೆ ಮತ್ತು ರೋಸಾ ರಾಮ್ಟೆಕೆ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : ಒಂದೇ ಕುಟುಂಬದ ಐವರಿಗೆ ವಿಷ ಉಣಿಸಿ ಹತ್ಯೆ ಮಾಡಿದ್ದ ಇಬ್ಬರು ಮಹಿಳೆಯರು ಅರೆಸ್ಟ್