ಮೈಸೂರು: ಸಂಭ್ರಮದ ಚಾಮುಂಡೇಶ್ವರಿ ಮಹಾ ರಥೋತ್ಸವಕ್ಕೆ ರಾಜವಂಶಸ್ಥ ಯದುವೀರ್ ಅವರು ಇಂದು ಚಾಮುಂಡಿ ಬೆಟ್ಟದಲ್ಲಿ ಚಾಲನೆ ನೀಡಿದ್ರು.
ನವರಾತ್ರಿ ಮುಕ್ತಾಯವಾದ 5ನೇ ದಿನ ಶುಭ ತುಲಾ ಲಗ್ನದಲ್ಲಿ ಬೆಳಗ್ಗೆ 6:48 ರಿಂದ 7:18ರ ವರೆಗಿನ ಶುಭ ಲಗ್ನದಲ್ಲಿ ಚಾಮುಂಡೇಶ್ವರಿಯ ಮಹಾ ರಥೋತ್ಸವ ಜರುಗಿತ್ತು.
ಇಂದು ಬೆಳಗ್ಗೆ 5 ಗಂಟೆಗೆ ಅಮ್ಮನವರ ಮೂಲ ವಿಗ್ರಹಕ್ಕೆ ಧಾರ್ಮಿಕ ವಿಧಿ ವಿಧಾನಗಳ ಬಳಿಕ ನಂತರ ಉತ್ಸವ ಮೂರ್ತಿಗೆ ಮಹಾ ಮಂಗಳಾರತಿ ಆದ ಮೇಲೆ ರಥದ ಮೇಲೆ ಉತ್ಸವ ಮೂರ್ತಿಯನ್ನು ಕೂರಿಸಿ ರಾಜವಂಶಸ್ಥರಿಗೆ ಮಹಾಮಂಗಳಾರತಿ ನೀಡಿದ ನಂತರ ಸ್ವತಃ ಯದುವೀರ್ ರಥದ ಹಗ್ಗವನ್ನು ಎಳೆಯುವ ಮೂಲಕ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು.
ಸ್ವಲ್ಪ ದೂರ ಸಾಗಿದ ಮೇಲೆ ಅಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು, ಸೊಸೆ ತ್ರಿಷಿಕಾ ಸಿಂಗ್ ಇರುವ ಸ್ಥಳಕ್ಕೆ ಆಗಮಿಸಿದ ನಂತರ ರಥ ಅಲ್ಲಿಗೆ ಬಂದು ನಿಲ್ಲುತ್ತದೆ. ಆ ಸಂದರ್ಭಗಳಲ್ಲಿ ಪ್ರಮೋದಾದೇವಿ ಒಡೆಯರ್ ಅವರಿಗೆ ಮಹಾ ಮಂಗಳಾರತಿ ನೀಡಿದ ನಂತರ ರಥ ಮುಂದಕ್ಕೆ ಸಾಗಿತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಮೋದಾದೇವಿ ಒಡೆಯರ್ ಅವರು, ನಾಡು ಸುಭಿಕ್ಷವಾಗಿರಲಿ ಎಂದು ಪ್ರಾರ್ಥಿಸಿದರು.
ಇನ್ನು ರಾಜವಂಶಸ್ಥ ಯದುವೀರ್ ಮಾತನಾಡಿ, ಈ ಬಾರಿ ದಸರಾ ಸಾಂಗವಾಗಿ ಜರುಗಿದ್ದು, ಎಲ್ಲರಿಗೂ ಚಾಮುಂಡಿ ತಾಯಿ ಒಳ್ಳೆಯದನ್ನು ಮಾಡಲಿ ಎಂದರು.