ಮೈಸೂರು: ನಾಡಹಬ್ಬ ದಸರಾ ಸರಳವಾಗಿ ಆಚರಿಸಲು ಸರ್ಕಾರ ಮುಂದಾಗಿದೆ. ಈ ಮಧ್ಯೆ ಹಲವು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದು, ಮಾವುತರು ಹಾಗೂ ಕಾವಾಡಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. ಮೊದಲಿಗೆ ಕೊರೊನಾ ತಪಾಸಣೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದವರನ್ನು ಅಧಿಕಾರಿಗಳು ಮನವೊಲಿಸಿ ಗಂಟಲು ದ್ರವದ ಮಾದರಿ ಪಡೆದುಕೊಂಡಿದ್ದಾರೆ.
ಗಜಪಡೆ ಕ್ಯಾಪ್ಟನ್ ಅಭಿಮನ್ಯು, ಗೋಪಿ, ವಿಕ್ರಮ, ಕಾವೇರಿ, ವಿಜಯ ಈ ಐದು ಆನೆಗಳೊಂದಿಗೆ ಮಾವುತರು ಹಾಗೂ ಕಾವಾಡಿಗಳು ಸೇರಿದಂತೆ 30 ಮಂದಿ ಬಂದಿದ್ದಾರೆ. ಅವರೆಲ್ಲರಿಗೂ ಗಜಪಡೆ ತಾಲೀಮು ಆರಂಭಕ್ಕೂ ಮುನ್ನ ಕೊರೊನಾ ಪರೀಕ್ಷೆ ಮಾಡಿಸಿದ್ರೆ ಮುಂದಾಗುವ ಅನಾಹುತಗಳನ್ನ ತಪ್ಪಿಸಬಹುದು ಎಂಬುದು ಅರಣ್ಯಾಧಿಕಾರಿಗಳ ಆಲೋಚನೆಯಾಗಿದೆ.
ಈ ಬಾರಿ ದಸರಾ ನಡೆಯುತ್ತಿರುವುದೇ ದೊಡ್ಡ ವಿಶೇಷ. ದಸರಾ ನಿಲ್ಲಿಸಬಾರದು ಎಂಬ ಉದ್ದೇಶದಿಂದ ಕೆಲವು ಮಾರ್ಗಸೂಚಿಗಳ ಆಧಾರದ ಮೇಲೆ ದಸರಾ ನಡೆಯುತ್ತಿದೆ. ಮೊದಲ ಹಂತದಲ್ಲಿ ಮಾವುತರು ಹಾಗೂ ಕಾವಾಡಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದೆ. ನೆಗೆಟಿವ್ ವರದಿ ಬರುತ್ತದೆ ಎಂಬ ನಂಬಿಕೆಯಿದೆ. ಪಾಸಿಟಿವ್ ಬಂದರೆ ಬದಲಾವಣೆ ಮಾಡಬಹುದು ಎಂಬುದು ಅಧಿಕಾರಿಗಳ ಅಭಿಪ್ರಾಯ.