ಮೈಸೂರು: ಕೇಂದ್ರ ಸರ್ಕಾರದ ತಪ್ಪು ನಿರ್ಧಾರದಿಂದ ದೇಶದಲ್ಲಿ ಕೊರೊನಾ ಹರಡುತ್ತಿದೆ ಎಂದು ಮಾಜಿ ಸಂಸದ ಧ್ರುವನಾರಾಯಣ ಆರೋಪಿಸಿದರು.
ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಮೊದಲು ಕೊರೊನಾ ಪತ್ತೆಯಾಗಿಲ್ಲ. ಬೇರೆ ದೇಶದಿಂದ ಬಂದವರಿಂದ ಕೊರೊನಾ ಹರಡಿದೆ. ದಕ್ಷಿಣ ಕೊರಿಯಾ, ತೈವನ್ ದೇಶಗಳಲ್ಲಿ ತೆಗೆದುಕೊಂಡ ನಿರ್ಧಾರದಿಂದ ಅಲ್ಲಿ ಲಾಕ್ಡೌನ್ ಆಗಲಿಲ್ಲ. ಆದರೆ ನಮ್ಮ ದೇಶದಲ್ಲಿ ವಿದೇಶದಿಂದ ಬಂದವರನ್ನು ಏರ್ಪೋರ್ಟ್ನಲ್ಲಿ ತಪಾಸಣೆ ಮಾಡಿ ಆಗಲೇ ಕ್ವಾರಂಟೈನ್ ಮಾಡಿದ್ದರೆ ದೇಶಕ್ಕೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲ್ಲಿಲ್ಲ ಎಂದರು. ಇನ್ನು ಜುಬಿಲಂಟ್ ಕಂಪನಿ ಪ್ರಕರಣ ತನಿಖೆ ನಡೆಸದೆ 50 ಕಿಟ್ ಹಾಗೂ 10 ಗ್ರಾಮಗಳನ್ನು ದತ್ತು ಪಡೆಯುವ ಆಮಿಷಕ್ಕೆ ಒಳಗಾಗಿರುವುದು ಕಿಕ್ ಬ್ಯಾಕ್ ಪಡೆದಂತೆ ಎಂದು ನಾನು ಹೇಳಿದ್ದು. ಇದನ್ನು ಅರ್ಥ ಮಾಡಿಕೊಳ್ಳದೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ನನ್ನ ವಿರುದ್ಧ ಬೇಜವಾಬ್ದಾರಿಯಿಂದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಇನ್ನು ರಜೆ ದಿನವಾದ ಭಾನುವಾರ ಕರ್ಫ್ಯೂ ಮಾಡುವುದು ಹಾಸ್ಯಾಸ್ಪದವಾಗಿದೆ. ಭಾನುವಾರ ಅಂದ ಮೇಲೆ ನಗರ ಪ್ರದೇಶದಲ್ಲಿ ಜನ ಹೊರಗೆ ಬರುವುದು ಕಡಿಮೆ. ಗ್ರಾಮೀಣ ಭಾಗದಲ್ಲಿ ಮಾತ್ರ ಕೃಷಿ ಚಟುವಟಿಕೆ ಎಂದಿನಂತೆ ಇರುತ್ತದೆ. ವಾರ ಪೂರ್ತಿ ರೈಲು, ಬಸ್ ಸಂಚಾರಕ್ಕೆ ಅವಕಾಶ ಕೊಟ್ಟು ಭಾನುವಾರ ಕರ್ಫ್ಯೂ ಮಾಡೋದರಿಂದ ಏನು ಪ್ರಯೋಜನವಿಲ್ಲ ಎಂದರು.