ಮೈಸೂರು: ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ರಾಸಾಯನಿಕ ಔಷಧಿ ಸಿಂಪಡಿಸಿ, ಪಕ್ಷಿಗಳ ಪಿಕ್ಕೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಜಿಲ್ಲೆಯಲ್ಲಿ ಹಕ್ಕಿಜ್ವರ ಇರುವುದು ದೃಢವಾಗಿದ್ದು, ಮೃಗಾಲಯವನ್ನು ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಆದರೂ ಸಹ ಒಳಗೆ ಇರುವ ಪ್ರಾಣಿ ಮತ್ತು ಪಕ್ಷಿಗಳ ಸುರಕ್ಷತೆಗಾಗಿ ಮೃಗಾಲಯದ ಮುಖ್ಯ ದ್ವಾರದಿಂದ ಆವರಣದ ರಸ್ತೆಗಳಿಗೆ, ಪಕ್ಷಿಗಳ ಗೂಡುಗಳ ಸುತ್ತ ಹಾಗೂ ಮೃಗಾಲಯದ ಆವರಣದ ಕೊಳಗಳ ಸುತ್ತ ವೈರಾಣು ನಾಶದ ರಾಸಾಯನಿಕ ದ್ರಾವಣದ ಔಷಧಿ ಸಿಂಪಡಿಸಲಾಗಿದೆ.
ಅಲ್ಲದೆ ಮೃಗಾಲಯದಲ್ಲಿರುವ ಪಕ್ಷಿಗಳ ಪಿಕ್ಕೆಗಳನ್ನು ಪರೀಕ್ಷೆ ಮಾಡುವುದಕ್ಕಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೃಗಾಲಯಕ್ಕೆ ಹಕ್ಕಿಜ್ವರ ಬಾರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.