ಮಂಡ್ಯ: ಜಿಲ್ಲೆಯ ಜೀವನಾಡಿ ಕೆಆರ್ಎಸ್ ಅಣೆಕಟ್ಟೆ ಬಹುತೇಕ ತುಂಬಿದ್ದು, ಸಿಎಂ ಯಡಿಯೂರಪ್ಪ ಬಾಗಿನ ಅರ್ಪಣೆಗೆ ದಿನಾಂಕ ನಿಗದಿ ಆಗಬೇಕಾಗಿದೆ.
ಸದ್ಯ ಕೆ.ಆರ್.ಸಾಗರ ಅಣೆಕಟ್ಟೆಯ ನೀರಿನಮಟ್ಟ 124.05 ಅಡಿ ಇದ್ದು, ನಾಳೆ ಬೆಳಗ್ಗೆ 8 ಗಂಟೆ ವೇಳೆಗೆ 124.80 ಅಡಿ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ.
ಸದ್ಯ ಅಣೆಕಟ್ಟೆಗೆ ಒಳಹರಿವು 13518 ಕ್ಯೂಸೆಕ್ ಇದೆ. ಹೊರ ಹರಿವು 3,863 ಕ್ಯೂಸೆಕ್ ಇದ್ದು, ನಾಲೆಗಳಿಗೂ ನೀರು ಬಿಡಲಾಗುತ್ತಿದೆ. ನೀರಿನ ಸಂಗ್ರಹ 48.405 ಟಿಎಂಸಿ ಆಗಿದೆ. ಸ್ವಾತಂತ್ರ್ಯ ದಿನಾಚರಣೆ ದಿನವೇ ಅಣೆಕಟ್ಟೆ ತುಂಬಲಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಆಗಸ್ಟ್ 20ರ ವೇಳೆಗೆ ಸಿಎಂ ಬಾಗಿನ ಅರ್ಪಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.