ಮಂಡ್ಯ: ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ರಾಜಕೀಯ ನಡೆ ಜೋರಾಗಿಯೇ ಸಾಗಿದೆ. ರೈತ ಸಂಘದ ಬೆಂಬಲ ಕೋರಿ ದಿವಂಗತ ಪುಟ್ಟಣ್ಣಯ್ಯ ಮನೆಗೆ ತೆರಳಿ, ಸುನೀತಾ ಪುಟ್ಟಣ್ಣಯ್ಯಗೆ ಬೆಂಬಲ ಸೂಚಿಸುವಂತೆ ಮನವಿ ಪತ್ರ ಕೊಟ್ಟಿದ್ದಾರೆ.
ಮನವಿ ಪತ್ರ ಸ್ವೀಕಾರ ಮಾಡಿದ ಸುನೀತಾ ಪುಟ್ಟಣ್ಣಯ್ಯ, ಶನಿವಾರ ಕಾರ್ಯಕರ್ತರ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇನ್ನು ಬೆಂಬಲ ನೀಡಿದರೆ ಯಾರು ಪ್ರಚಾರಕ್ಕೆ ಬರಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿದ ಇಬ್ಬರು ಮಹಿಳಾ ನಾಯಕಿಯರು, ಚುನಾವಣೆಯ ಕಾರ್ಯತಂತ್ರಗಳು ಹಾಗೂ ಬೆಂಬಲ ಕುರಿತು ಸುದೀರ್ಘವಾಗಿ ಚರ್ಚೆ ಮಾಡಿದ್ದಾರೆ.
ಭೇಟಿ ನಂತರ ಮಾತನಾಡಿದ ಸುನೀತಾ ಪುಟ್ಟಣ್ಣಯ್ಯ, ಓರ್ವ ಮಹಿಳೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿಂತಿದ್ದಾರೆ, ಅದರಲ್ಲೂ ಸಿಎಂ ಪುತ್ರನ ವಿರುದ್ಧ ಸ್ಪರ್ಧೆ ಮಾಡಿದ್ದಾರೆ. ವೈಯಕ್ತಿಕವಾಗಿ ಹೇಳುವುದಾದ್ರೆ ಬೆಂಬಲ ಕೊಡಬೇಕು ಎನ್ನಿಸುತ್ತಿದೆ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಸುಮಲತಾ ಅಂಬರೀಶ್, ರೈತ ಸಂಘದ ಬೆಂಬಲ ಕೋರಿ ಮನವಿ ಮಾಡಿದ್ದೇನೆ. 25 ರಂದು ಚರ್ಚೆ ಮಾಡಿ ತಿಳಿಸುತ್ತೇನೆ ಎಂದಿದ್ದಾರೆ. ಹೋರಾಟದಲ್ಲಿ ಪುಟ್ಟಣ್ಣಯ್ಯ ಇರದೇ ಇರೋದು ದೊಡ್ಡ ಕೊರತೆ. ಹೋರಾಟಗಾರರ ಜೊತೆ ಕೈ ಜೋಡಿಸಿ ಹೋದರೆ ಉತ್ತಮ ಎಂಬುದು ನನ್ನ ಅನಿಸಿಕೆ. ಇದೇ ಮೊದಲ ಅಜೆಂಡಾ ಇರಬೇಕು ಎಂಬುದು ನಮ್ಮ ನಿಲುವು.
ಕಾಂಗ್ರೆಸ್ ಮುಖಂಡರ ಅಮಾನತ್ತು ವಿಚಾರವಾಗಿ ಮಾತನಾಡಿ, ನಾನು ನಿರೀಕ್ಷೆ ಮಾಡಿದ್ದೆ. ಈ ವಿಚಾರವನ್ನೂ ಅವರ ಜೊತೆ ಚರ್ಚೆ ಮಾಡಿದ್ದೆ. ಇನ್ನೂ ಮುಕ್ತವಾಗಿ ನನ್ನ ಜೊತೆ ಇರುತ್ತಾರೆ ಎಂದರು. ದರ್ಶನ್ ಮತ್ತು ಯಶ್ ಬಗ್ಗೆ ಯಾರೋ ಒಬ್ಬರು ಮಾತನಾಡುವುದರಿಂದ ಅವರ ಇಮೇಜ್ಗೆ ಧಕ್ಕೆ ಆಗುವುದಿಲ್ಲ. ಅವರ ಅಭಿಮಾನಿಗಳು ಕೋಟ್ಯಂತರ ಜನರಿದ್ದಾರೆ. ಅವರನ್ನೆಲ್ಲಾ ಇವರು ಕಟ್ಟಿ ಹಾಕಲು ಸಾಧ್ಯವೇ. ಈ ಮಾತಿನ ಮೂಲಕ ಅವರು ಎಲ್ಲೆಲ್ಲಿ ಸ್ಪರ್ಧೆ ಮಾಡುತ್ತಿದ್ದಾರೋ ಅಲ್ಲೆಲ್ಲಾ ಪರಿಣಾಮ ಬೀರುತ್ತದೆ. ಅಭಿಮಾನಿಗಳಿಗೆ ಬೇಜಾರ್ ಆಗುತ್ತೆ, ಅವರು ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದಿದ್ದಾರೆ.
ರೈತ ಸಂಘದ ಬೆಂಬಲ ಕೊಡುತ್ತಾರೆ ಎಂಬ ನಂಬಿಕೆ ಇದೆ. ಬೆಂಬಲ ನೀಡಿದರೆ ಅದು ದೊಡ್ಡ ಬಲ. ಆ ನಿರೀಕ್ಷೆಯಲ್ಲೇ ನಾನು ಬಂದಿದ್ದೇನೆ ಎಂದ ಅವರು, ಅಮರಾವತಿ ಚಂದ್ರಶೇಖರ್ ವಿಚಾರವಾಗಿ ಮಾತನಾಡಿ, ಎಲ್ಲರೂ ಅಂಬರೀಶ್ ರೀತಿ ಇರಲು ಸಾಧ್ಯವಿಲ್ಲ. ಯಾರು ಹೇಗೆ ಎಂಬುದು ಗೊತ್ತಾಗುತ್ತಿದೆ ಎಂದಿದ್ದಾರೆ.