ಮಂಡ್ಯ: ಅಭ್ಯರ್ಥಿಗಳಿಗೆ ನೀಡಿರುವ ಕ್ರಮ ಸಂಖ್ಯೆ ಬಗ್ಗೆ ಆಕ್ಷೇಪ ಕೇಳಿ ಬಂದಿದೆ. ಯಾವ ಆಧಾರದ ಮೇಲೆ ಸಂಖ್ಯೆ ನೀಡಲಾಗಿದೆ ಎಂಬುದು ಗೊಂದಲವಾಗಿದೆ. ಈ ಬಗ್ಗೆ ಬಿಎಸ್ಪಿ ಅಭ್ಯರ್ಥಿ ಆಕ್ಷೇಪ ವ್ಯಕ್ತಪಡಿಸಿದ್ದು, ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಎಸ್ಪಿ ಅಭ್ಯರ್ಥಿ ನಂಜುಂಡಸ್ವಾಮಿ, ಕಾಂಗ್ರೆಸ್ ಹಾಗೂ ಬಿಜೆಪಿ ಹೊರತುಪಡಿಸಿದರೆ ನಮ್ಮ ಪಕ್ಷ ತೃತೀಯ ರಾಷ್ಟ್ರೀಯ ಪಕ್ಷ. ನಮಗೆ ಮೊದಲ ಕ್ರಮ ಸಂಖ್ಯೆ ನೀಡಬೇಕಾಗಿತ್ತು. ಆದರೆ, ಜೆಡಿಎಸ್ ಅಭ್ಯರ್ಥಿಗೆ ನೀಡಲಾಗಿದೆ. ಹೀಗಾಗಿ ಅನುಮಾನ ಬಂದಿದೆ. ದೂರು ನೀಡುತ್ತೇವೆ. ಸಮರ್ಪಕ ಉತ್ತರ ಸಿಗದೇ ಇದ್ದರೆ, ರಾಜ್ಯ ಮುಖ್ಯ ಚುನಾವಣಾಧಿಕಾರಿಯನ್ನ ಕೇಳುತ್ತೇವೆ ಎಂದರು.
ಮಂಡ್ಯಕ್ಕೆ ಆಗಮಿಸಿದ ರಾಜ್ಯ ಚುನಾವಣಾ ಆಯುಕ್ತ:
ಜೆಡಿಎಸ್ ಅಭ್ಯರ್ಥಿ ನಿಖಿಲ್ ನಾಮಪತ್ರದ ಬಗ್ಗೆ ಆಕ್ಷೇಪಣೆ, ಸುಮಲತಾ ಅಂಬರೀಶ್ ಚುನಾವಣಾ ಏಜೆಂಟ್ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಮಂಡ್ಯಕ್ಕೆ ಆಗಮಿಸಿದ್ದಾರೆ. ದೂರುಗಳ ಬಗ್ಗೆ ಮೈಸೂರು ವಲಯ ಐಜಿಪಿ, ಚುನಾವಣಾ ವೀಕ್ಷಕರು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಸಭೆ ಮಾಡುತ್ತಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸುಮಲತಾ ಅಂಬರೀಶ್ ಚುನಾವಣಾ ಏಜೆಂಟ್ ಮದನ್ ಕುಮಾರ್ ಹಾಗೂ ಬಿಎಸ್ಪಿ ಅಭ್ಯರ್ಥಿ ನಂಜುಂಡಸ್ವಾಮಿ ಅವರಿಂದಲೂ ವಿವರಣೆ ಪಡೆಯುತ್ತಿದ್ದಾರೆ.