ಮಂಡ್ಯ: ಗೂಟದ ಕಾರು ಬಿಟ್ಟು ಸ್ವಂತ ಕಾರಿನಲ್ಲಿ ಹೋದರೆ ಕೆಲವರಿಗೆ ನಿರಾಶೆ ಉಂಟಾಗುತ್ತದೆ. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಲೇವಡಿ ಮಾಡಿದರು.
ನಗರದ ವಕೀಲರ ಭವನದಲ್ಲಿ ಸಿಎಎ ಮತ್ತು ಎನ್ಆರ್ಸಿ ಬಗ್ಗೆ ಸಂವಾದ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರ್ಥಿಕ ದಿವಾಳಿ ಎಂಬುದು ಒಮ್ಮೆಲೇ ಬರುವುದಲ್ಲ. ಇದಕ್ಕೆ ಹಿಂದಿನ ಸರ್ಕಾರಗಳ ಆಡಳಿತವೇ ಕಾರಣವಾಗಿರುತ್ತದೆ. ಈ ವಿಚಾರವಾಗಿ ಯಡಿಯೂರಪ್ಪನವರಿಗೆ ಶಹಬ್ಬಾಸ್ಗಿರಿ ಕೊಡಲೇಬೇಕು. 70 ವರ್ಷ ವಯಸ್ಸಾದರೂ ಯಡಿಯೂರಪ್ಪನವರು ಸಮರ್ಥವಾಗಿ ಆಡಳಿತ ಮಾಡುತ್ತಿದ್ದಾರೆ ಎಂದರು.
ಸಂಪುಟ ವಿಚಾರವಾಗಿ ನಾವು ಅವರಿಗೆ ಮಾತು ಕೊಟ್ಟಿದ್ದೇವೆ, ಅದರಂತೆ ನಡೆದುಕೊಳ್ಳುತ್ತೇವೆ. ವಿಸ್ತರಣೆಯ ಸಂಪೂರ್ಣ ಅಧಿಕಾರ ಸಿಎಂಗೆ ಬಿಟ್ಟದ್ದು ಎನ್ನುವ ಮೂಲಕ ಎಲ್ಲಾ ನೂತನ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ಸಿಗುವ ಗುಟ್ಟು ಬಿಟ್ಟುಕೊಟ್ಟರು.
ಕಾಂಗ್ರೆಸ್ನಿಂದ ಗೊಂದಲ:
ಎನ್ಆರ್ಸಿ ಮತ್ತು ಸಿಎಎ ವಿಚಾರವಾಗಿ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಗೊಂದಲ ಸೃಷ್ಟಿ ಮಾಡುತ್ತಿವೆ. ಈ ಕಾಯ್ದೆಯಿಂದ ಭಾರತೀಯ ಮುಸಲ್ಮಾನರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಗೊಂದಲಗಳಿಗೆ ಕಿವಿ ಕೊಟ್ಟರೆ ನೀವೇ ಸಮಸ್ಯೆಗೆ ಸಿಲುಕಿಕೊಳ್ಳುತ್ತೀರಿ ಎಂದು ಇದೇ ವೇಳೆ ಹೇಳಿದರು.