ಮಂಡ್ಯ : ಮೈಶುಗರ್ ಕಾರ್ಖಾನೆ ಸದ್ಯ ಸ್ಥಗಿತಗೊಂಡಿದೆ. ಮತ್ತೆ ಪುನಾರಂಭಿಸುವಂತೆ ಸರ್ಕಾರದ ಮೇಲೆ ಒತ್ತಡಗಳು ಬರ್ತಿವೆ. ಆದ್ರೆ, ಸರ್ಕಾರ ಮಾತ್ರ ಯಾಕೋ ಕಾರ್ಖಾನೆ ಆರಂಭಿಸಲು ಮೀನಾಮೇಷ ಎಣಿಸುತ್ತಿದೆ.
ಈ ಸಂದರ್ಭದಲ್ಲಿ ಕಾರ್ಖಾನೆ ನೌಕರರಿಗೆ ಸಂಬಳ ನೀಡಲು ಆಡಳಿತ ಮಂಡಳಿ ಗೋಡೌನ್ನಲ್ಲಿ ಕೊಳೆಯುತ್ತಿದ್ದ ಸಕ್ಕರೆ ಮಾರಾಟ ಮಾಡಲು ಮುಂದಾಗಿರೋದು ರೈತರ ವಿರೋಧಕ್ಕೆ ಕಾರಣವಾಗಿದೆ.
ಮೈಶುಗರ್ ಕಾರ್ಖಾನೆಯನ್ನು ಮತ್ತೆ ಆರಂಭಿಸಬೇಕು ಎಂದು ಹೋರಾಟಗಳು ನಡೆಯುತ್ತಿವೆ. ಅಲ್ಲದೇ ಸರ್ಕಾರಕ್ಕೆ ಒತ್ತಡ, ಪ್ರಸ್ತಾವನೆ ಬರ್ತಾನೆ ಇದೆ. ಆದ್ರೆ, ಕಾರ್ಖಾನೆ ಆರಂಭಿಸಿದ್ರೆ ಸರ್ಕಾರಿ ಸ್ವಾಮ್ಯದಲ್ಲೇ ಇರಲಿ ಎಂದು ಒಬ್ಬರು ಅಂದ್ರೆ, ಮತ್ತೊಬ್ಬರು ಸರ್ಕಾರಿ, ಖಾಸಗಿ ಯಾವುದಾದ್ರು ಆಗಲಿ ಬೇಗ ಕಾರ್ಖಾನೆ ಆರಂಭಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಸರ್ಕಾರ ಮಾತ್ರ ಕಾರ್ಖಾನೆ ಆರಂಭಿಸುವ ಕೆಲಸಕ್ಕೆ ಮೀನಾಮೇಷ ಎಣಿಸುತ್ತಿದೆ.
ಇಂತಹ ಸಂದರ್ಭದಲ್ಲಿ ಇದೇ ವೇಳೆ ಮೂರ್ನಾಲ್ಕು ವರ್ಷದಿಂದ ಗೋಡೌನ್ನಲ್ಲಿ ಕೊಳೆಯುತ್ತಿದ್ದ ಸಕ್ಕರೆಯನ್ನ ಇದೀಗ ಕಾರ್ಖಾನೆ ಆಡಳಿತ ಮಂಡಳಿ ಮಾರಾಟ ಮಾಡಿ ನೌಕರರ ಸಂಬಳಕ್ಕೆ ಬಳಸಿಕೊಳ್ಳಲು ಮುಂದಾಗಿದೆ. 32 ಸಾವಿರ ಕ್ವಿಂಟಾಲ್ ಇದ್ದ ಸಕ್ಕರೆಯಲ್ಲಿ ಈಗಾಗಲೇ 30 ಸಾವಿರ ಕ್ವಿಂಟಾಲ್ ಸಕ್ಕರೆಯನ್ನ ಮಾರಾಟ ಮಾಡಿ, ಕಾರ್ಖಾನೆಯಿಂದ ನಿವೃತ್ತಿ ಹೊಂದಿದ್ದ ಸಿಬ್ಬಂದಿಗೆ ಗ್ರ್ಯಾಜುಟಿಗೆ ಬಳಸಿಕೊಂಡಿದ್ದು, ಮತ್ತಷ್ಟು ಹಣವನ್ನ ಸಂಬಳಕ್ಕೆ ಬಳಸಿಕೊಂಡಿದೆ.
ಸದ್ಯ ಇನ್ನು, 1200 ಕ್ವಿಂಟಾಲ್ ಸಕ್ಕರೆ ಗೋಡೌನ್ನಲ್ಲಿದ್ದು, ಮಾರಾಟ ಮಾಡಲು ಸಹಕಾರ ಇಲಾಖೆಯ ಅನುಮತಿ ಪಡೆಯಲು ಪತ್ರ ಬರೆಯಲಾಗಿದೆ. ಅದನ್ನು ಸಹ ಮಾರಾಟ ಮಾಡಿ ನೌಕರರ ಸಂಬಳಕ್ಕೆ ಬಳಸಿಕೊಳ್ಳಲು ಮುಂದಾಗಿದ್ದು, ಸ್ಕ್ರಾಪ್ ವಸ್ತುಗಳನ್ನ ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದೆ.
ಇನ್ನು, ಮೈಶುಗರ್ ಕಾರ್ಖಾನೆ ಆಡಳಿತ ಮಂಡಳಿ ನಿರ್ಧಾರಕ್ಕೆ ರೈತ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಗೋಡೌನ್ನಲ್ಲಿರುವ ಸಕ್ಕರೆ ಕಳಪೆ ಮಟ್ಟದ್ದಾಗಿದ್ದು, ತಿನ್ನಲು ಯೋಗ್ಯವಲ್ಲ. ಸಕ್ಕರೆ ತಯಾರಿಕೆ ಸಂದರ್ಭದಲ್ಲೇ ಅದು ಹಳದಿ ಬಣ್ಣಕ್ಕೆ ತಿರುಗಿದ್ದು, ಮಾರಾಟ ಮಾಡಿರುವುದು ತಿಳಿದಿದ್ದರೆ ತಡೆಯುತ್ತಿದ್ದೆವು. ಮೂರ್ನಾಲ್ಕು ವರ್ಷ ಕೊಳೆಯಲು ಬಿಟ್ಟು ಈಗ ಮಾರಾಟ ಮಾಡುವುದು ಸರಿಯಲ್ಲ.
ಇದು ಮಂಡ್ಯ ಜಿಲ್ಲೆಗೆ ಅವಮಾನಕರ ಎನ್ನುತ್ತಿದ್ದಾರೆ. ಮೂರ್ನಾಲ್ಕು ವರ್ಷದಿಂದ ಇಟ್ಟಲ್ಲೇ ಇಟ್ಟು ಸಕ್ಕರೆ ಕೊಳೆಸಿರುವ ಕಾರ್ಖಾನೆ ಆಡಳಿತ ಮಂಡಳಿ ಅನಿವಾರ್ಯವಾಗಿ ನೌಕರರ ಸಂಬಳಕ್ಕಾಗಿ ಈಗ ಸಕ್ಕರೆ ಮಾರಾಟ ಮಾಡಲು ಮುಂದಾಗಿರುವುದು ವಿಪರ್ಯಾಸ. ಕಳಪೆ ಮಟ್ಟದ ಸಕ್ಕರೆ ಮಾರಾಟ ಮಾಡೋದು ಎಷ್ಟು ಸರಿ ಎಂದು ಜನರು ಪ್ರಶ್ನೆ ಮಾಡ್ತಿದ್ದಾರೆ.