ಹಾಸನ: ಜಿಲ್ಲೆಯಲ್ಲಿ ಐಟಿ ದಾಳಿ ಮುಂದುವರಿದಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಲದೇವರು ಹರದನಹಳ್ಳಿ ಈಶ್ವರ ದೇವಾಲಯದಲ್ಲಿಯೂ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಹಾಗೆಯೇ ಹರದನಳ್ಳಿಯ ಈಶ್ವರ ದೇವಾಲಯದ ಅರ್ಚಕ ಪ್ರಕಾಶ್ ಭಟ್ ಮನೆ ಮೇಲೆ ಕೂಡ ಐಟಿ ದಾಳಿ ನಡೆದಿದೆ. ಮೂರು ಮಂದಿ ಅಧಿಕಾರಿಗಳ ತಂಡದಿಂದ ಮನೆ ಹಾಗೂ ದೇವಾಲಯದ ಪ್ರಾಂಗಣದಲ್ಲಿ ಪರಿಶೋಧನೆ ನಡೆದಿದೆ. ಅರ್ಚಕರ ಮನೆಯಲ್ಲಿ ದೊರೆತ ಕೆಲವು ದಾಖಲಾತಿಗಳನ್ನು ಐಟಿ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಐಟಿ ಕಚೇರಿಗೆ ದೂರು ದಾಖಲಿಸಿದ್ದರು. ಅಲ್ಲದೆ ಜಿಲ್ಲೆಯ ಕೆಲ ಅರ್ಚಕರ ಮನೆಯಲ್ಲಿ ಚುನಾವಣೆಗೆ ಖರ್ಚು ಮಾಡಲು ಹಣವನ್ನು ಇಟ್ಟಿದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ಐಟಿ ದಾಳಿ ನಡೆದಿದೆ ಎನ್ನಲಾಗುತ್ತಿದೆ.