ಮಂಡ್ಯ: ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಸಿದ ಫಸಲನ್ನು ಉಚಿತವಾಗಿ ಜಿಲ್ಲಾಡಳಿತಕ್ಕೆ ಕೊಡುವ ಮೂಲಕ ಇತರ ರೈತರಿಗೂ ಮಾದರಿಯಾಗಿದ್ದಾರೆ. 3 ಎಕರೆಯಲ್ಲಿ ಬೆಳೆದ ಸಂಪೂರ್ಣ ಕ್ಯಾಪ್ಸಿಕಂ ಬೆಳೆ, ಅಂದಾಜು 3 ಲಕ್ಷ ಮೌಲ್ಯದ ಬೆಳೆ ನೀಡಿದ್ದಾರೆ.

ಮದ್ದೂರು ತಾಲೂಕಿನ ಭೀಮನಕೆರೆ ರೈತ ಮಹಾದೇವಯ್ಯ ಅವರು ತಮ್ಮ ತೋಟದಲ್ಲಿ ಬೆಳೆದಿದ್ದ ಕ್ಯಾಪ್ಸಿಕಂ ಅನ್ನು ಹೊರ ರಾಜ್ಯಗಳಿಗೆ ರಫ್ತು ಮಾಡುತ್ತಿದ್ದರು. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ವೈಜ್ಞಾನಿಕವಾಗಿ ಈ ಬೆಳೆ ನೆಟ್ಟಿದ್ದರು. ಕಟಾವಿಗೆ ಬಂದ ವೇಳೆ ಲಾಕ್ಡೌನ್ ಆಗಿದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ.
ಕಟಾವಿಗೆ ಬಂದ ಬೆಳೆಗಳನ್ನು ಅಲ್ಲಿಯೇ ಬಿಡಬೇಡಿ. ತಾಲೂಕು, ಜಿಲ್ಲಾಡಳಿತಕ್ಕೆ ನೀಡಿ, ಅವಶ್ಯಕ ಇದ್ದವರಿಗೆ ಸರ್ಕಾರ ಪೂರೈಸುತ್ತದೆ. ಇದರಿಂದ ಹಸಿದವರ ಹೊಟ್ಟೆ ತುಂಬುತ್ತದೆ ಎಂದು ರೈತ ಮಹಾದೇವಯ್ಯ ಮನವಿ ಮಾಡಿದ್ದಾರೆ.
ಮೆಚ್ಚುಗೆ ವ್ಯಕ್ತಪಡಿಸಿದ ಅಧಿಕಾರಿಗಳು, ಬೆಳೆಯನ್ನು ನಾಶಪಡಿಸಬೇಡಿ. ಮಾರಾಟವಾಗದಿದ್ದರೇ ತೋಟಗಾರಿಕೆ ಇಲಾಖೆಗೆ ತಿಳಿಸಿ. ನಿರಾಶ್ರಿತರಿಗೆ, ಬಡವರಿಗೆ ಜಿಲ್ಲಾಡಳಿತದಿಂದ ಉಚಿತವಾಗಿ ನೀಡುತ್ತೇವೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಜು ತಿಳಿಸಿದರು.