ಮಂಡ್ಯ: ಸೇತುವೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ನದಿಗೆ ಬಿದ್ದ ಮಹಿಳೆಯನ್ನು ಮೀನುಗಾರರು ರಕ್ಷಿಸಿದ್ದಾರೆ. ಕೆ.ಆರ್.ಎಸ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮೈಸೂರಿನ ಕೂರ್ಗಳ್ಳಿ ಮೂಲದ ದಂಪತಿ ಕೆಆರ್ಎಸ್ ನೋಡಲು ಬಂದಿದ್ದರು. ಡ್ಯಾಂ ನೋಡಿ ವಾಪಸ್ ಹೋಗುವ ವೇಳೆ ಮಹಿಳೆ (ಆಶಾ) ಕೆಆರ್ಎಸ್ ಡ್ಯಾಂನ ಕೆಳ ಸೇತುವೆಯ ಮೇಲೆ ನಿಂತು ಸೆಲ್ಫಿ ತಗೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಸೇತುವೆ ಮೇಲಿಂದ 50 ಅಡಿ ಕೆಳಗಿನ ಕಾವೇರಿ ನದಿಗೆ ಬಿದ್ದಿದ್ದಾರೆ.
ಈ ವೇಳೆ ಪತಿ ಕೂಡ ವಿದ್ಯುತ್ ಕಂಬದ ಸಹಾಯದಿಂದ ಪತ್ನಿ ರಕ್ಷಣೆಗೆ ನದಿಗೆ ಜಿಗಿದಿದ್ದು, ಇಬ್ಬರು ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದರು. ಇದನ್ನು ನೋಡಿ ನದಿ ಬಳಿ ಇದ್ದ ಸ್ಥಳೀಯ ಮೀನುಗಾರರು ತೆಪ್ಪದ ಸಹಾಯದಿಂದ ನದಿಯಲ್ಲಿ ಕೊಚ್ಚಿಹೋಗುತ್ತಿದ್ದ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ.
ಘಟನೆಯಲ್ಲಿ ಮೇಲಿಂದ ಬಿದ್ದ ಕಾರಣಕ್ಕೆ ಇಬ್ಬರಿಗೂ ಸಣ್ಣಪುಟ್ಟ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮೈಸೂರಿಗೆ ಕಳಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: ಕಾರಿನಲ್ಲಿದ್ದ ವ್ಯಕ್ತಿ, ಟ್ರಾಫಿಕ್ ಪೊಲೀಸ್ ಕುತ್ತಿಗೆ ಬಿಗಿದಪ್ಪಿ ಎಳೆದೊಯ್ದ ಆರೋಪ : ವಿಡಿಯೋ