ಮಂಡ್ಯ: ಆಹಾರ ಸುರಕ್ಷತಾ ಅಧಿಕಾರಿ ಹೆಸರಲ್ಲಿ ಅಂಗಡಿ ಮಾಲೀಕರಿಂದ ಹಣ ವಸೂಲಿ ಮಾಡುತ್ತಿದ್ದ ಮಹಿಳೆಯನ್ನು ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಬಂಧಿಸಿದ್ದಾರೆ.
ಕಿಕ್ಕೇರಿ ಗ್ರಾಮದಲ್ಲಿ ಅಂಗಡಿ, ಹೋಟೆಲ್ಗಳಿಗೆ ಭೇಟಿ ನೀಡಿ ಆಹಾರ ಸುರಕ್ಷತಾ ಅಧಿಕಾರಿ ಎಂದು ಹೇಳಿಕೊಂಡು ಲೈಸನ್ಸ್ ತೋರಿಸುವಂತೆ ಈ ಮಹಿಳೆ ಕೇಳುತ್ತಿದ್ದಳಂತೆ. ಅನುಮಾನಗೊಂಡ ಸ್ಥಳೀಯರು ಆಕೆಯನ್ನು ವಿಚಾರಿಸಿದಾಗ ಕಕ್ಕಾಬಿಕ್ಕಿಯಾಗಿದ್ದಾಳೆ. ನಾನು ಎನ್ಜಿಇಯಿಂದ ಬಂದಿದ್ದೇನೆ. ಆಹಾರ ಸುರಕ್ಷತೆ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ ಎಂದು ಸಮಜಾಯಿಸಿ ನೀಡಿದ್ದಾಳೆ.
ಸಾರ್ವಜನಿಕರು ಪೊಲೀಸರಿಗೆ, ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಮಾಹಿತಿ ನೀಡಿ, ಈಕೆಯ ವಂಚನೆಗೆ ತಕ್ಕ ಪಾಠ ಕಲಿಸಿದ್ದಾರೆ. ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕನ್ನಡಪರ ಸಂಘಟನೆಗಳ ಹೆಸರನ್ನೂ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಆಹಾರ ಸುರಕ್ಷತಾ ವಿಭಾಗದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಈಕೆ ನಮ್ಮ ಇಲಾಖೆಯ ನೌಕರಳಲ್ಲ ಎಂದು ಮಾಹಿತಿ ನೀಡಿದ್ದಾರೆ.