ಕೊಪ್ಪಳ : ಜಿಲ್ಲೆಯಲ್ಲಿರುವ ಅಂತಾರಾಜ್ಯ ಕಾರ್ಮಿಕರನ್ನು ಅವರ ರಾಜ್ಯಕ್ಕೆ ತಲುಪಿಸಲು ಹುಬ್ಬಳ್ಳಿಯಿಂದ ನಾಳೆ ನಿಗದಿಯಾಗಿದ್ದ ರೈಲು ದಿಢೀರ್ ರದ್ದಾದ ಹಿನ್ನೆಲೆ ನಗರದಲ್ಲಿ ಅಂತಾರಾಜ್ಯ ಕಾರ್ಮಿಕರು ಪರದಾಡುವಂತಾಯಿತು.
ಜಿಲ್ಲೆಯ ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಬಿಹಾರ ಮೂಲದ ನೂರಾರು ಕಾರ್ಮಿಕರು ತವರು ರಾಜ್ಯಕ್ಕೆ ತೆರಳಲು ನಗರದ ಜಿಲ್ಲಾ ಕ್ರೀಡಾಂಗಣಕ್ಕೆ ಬಂದಿದ್ದರು. ಹುಬ್ಬಳ್ಳಿಯಿಂದ ಬಿಹಾರಕ್ಕೆ ನಾಳೆ ರೈಲು ನಿಗದಿಯಾಗಿತ್ತು. ಕಾರ್ಮಿಕರನ್ನು ಹುಬ್ಬಳ್ಳಿಗೆ ಇಂದು ರಾತ್ರಿ ಕಳುಹಿಸಲು ಏರ್ಪಾಡು ಮಾಡಿದ್ದರಿಂದ ಅನೇಕ ಕಾರ್ಮಿಕರು ನಗರದ ಜಿಲ್ಲಾ ಕ್ರೀಡಾಂಗಣಕ್ಕೆ ಬಂದಿದ್ದರು.
ಆದರೆ ರೈಲು ದಿಢೀರ್ ರದ್ದಾದ ಹಿನ್ನೆಲೆಯಲ್ಲಿ ವಾಪಾಸ್ ಕಾರ್ಖಾನೆಗಳಿಗೆ ತೆರಳುವಂತೆ ಕಾರ್ಮಿಕರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾರ್ಮಿಕರು, ಮರಳಿ ನಾವು ಕಾರ್ಖಾನೆಗೆ ಹೋಗುವುದಿಲ್ಲ. ಕೂಡಲೇ ನಮ್ಮ ರಾಜ್ಯಕ್ಕೆ ತೆರಳಲು ಪರ್ಯಾಯ ರೈಲು ವ್ಯವಸ್ಥೆ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ.