ಕೊಪ್ಪಳ : ಚುನಾವಣೆಯಲ್ಲಿ ಸೋತರೂ ಅವರನ್ನು ಎಂಎಲ್ಸಿ ಮಾಡಿ ಮತ್ತೆ ಸಚಿವರನ್ನಾಗಿ ಮಾಡಲಾಗಿದೆ. ರಾಜ್ಯದಲ್ಲಿ ಮೂರು ಪಕ್ಷದ ಸರ್ಕಾರವಿದ್ದರೆ ಅವರು ಸಚಿವರಾಗುತ್ತಿದ್ದರಾ? ಸಿ ಪಿ ಯೋಗೇಶ್ವರ್ ಅವರು ಈ ರೀತಿ ಮಾತನಾಡುವುದು ಸರಿಯಲ್ಲ. ಅವರು ಸುಧಾರಿಸಿಕೊಂಡು ಹೋಗುವುದು ಒಳ್ಳೆಯದು ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.
ಗಂಗಾವತಿಯಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿ ಒಂದಿಬ್ಬರು ಶಾಸಕರು ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ. ಸಿಎಂ ಯಡಿಯೂರಪ್ಪ ಅವರು ತಮ್ಮ 78ನೇ ವಯಸ್ಸಿನಲ್ಲಿಯೂ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ.
ಕೊರೊನಾ ಸೋಂಕಿನಿಂದ ದೇಶ, ರಾಜ್ಯದ ಜನರು ತತ್ತರಿಸುತ್ತಿದ್ದಾರೆ. ಸಾಕಷ್ಟು ಜನರು ಕೊರೊನಾ ಸೋಂಕಿಗೆ ಜೀವ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಆರೋಗ್ಯ ರಕ್ಷಣೆಗೆ ಹಾಗೂ ಕೊರೊನಾ ಹೊಡೆದೋಡಿಸುವ ಕೆಲಸವನ್ನು ನಾವೆಲ್ಲರೂ ಮೊದಲು ಮಾಡಬೇಕಿದೆ. ಅದನ್ನು ಬಿಟ್ಟು ಸುಮ್ಮನೆ ವ್ಯರ್ಥವಾದ, ಅಪ್ರಸ್ತುತವಾಗಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರವಿದೆ. ಸಿ ಪಿ ಯೋಗೇಶ್ವರ್ ಯಾವ ರೀತಿ ಮಾತನಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಮೂರು ಪಕ್ಷದ ಆಡಳಿತದ ಸರ್ಕಾರವಿದ್ದರೆ ಅವರೆಲ್ಲಿ ಸಚಿವರಾಗುತ್ತಿದ್ದರು.
ಸಿ ಪಿ ಯೋಗೇಶ್ವರ ಅಸಂಬದ್ದವಾಗಿ ಮಾತನಾಡಬಾರದು. ಚುನಾವಣೆಯಲ್ಲಿ ಸಿ.ಪಿ. ಯೋಗೀಶ್ವರ್ ಸೋತರೂ ಸಹ ಎಂಎಲ್ಸಿ ಮಾಡಿ ಸಚಿವರನ್ನಾಗಿಯೂ ಮಾಡಿದ್ದಾರೆ. ಸಚಿವ ಸ್ಥಾನವನ್ನು ಸರಿಯಾಗಿ ಉಪಯೋಗಿಸಿಕೊಂಡು ರಾಜ್ಯದ ಜನರ, ಕ್ಷೇತ್ರದ ಜನರ ಸೇವೆ ಮಾಡುವುದು ಆದ್ಯ ಕರ್ತವ್ಯ. ಅವರು ಆ ಕಡೆ ಗಮನ ಕೊಡಬೇಕು. ಅವರಿಗೆ ಅಸಮಧಾನವಿದ್ದರೆ ಸಂಪುಟದಿಂದ ಹೊರಬಂದು ಏನಾದರೂ ನಿರ್ಣಯ ತೆಗೆದುಕೊಳ್ಳಲಿ ಎಂದು ಹೇಳಿದ್ದಾರೆ.
ಯಾರೋ ದೆಹಲಿಗೆ ಹೋಗಿ ಸುಳ್ಳು ಸಬೂಬು ನೀಡಿದರೆ ಏನೂ ಆಗುವುದಿಲ್ಲ. ಯಾವ ಸಂದರ್ಭದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ನಮ್ಮ ಪಕ್ಷದ ವರಿಷ್ಠರಿಗೆ, ನಾಯಕರಿಗೆ ಗೊತ್ತಿದೆ. ಸಿಎಂ ತಮ್ಮ 78 ವಯಸ್ಸಿನಲ್ಲಿಯೂ ಸಾಕಷ್ಟು ಕೆಲಸ ಮಾಡುವ ಮೂಲಕ ನಮಗೆ ಮಾದರಿಯಾಗಿದ್ದಾರೆ.
ಸಿಎಂ ಬದಲಾವಣೆ ಇಲ್ಲ, ಯಾರೂ ಈ ಬಗ್ಗೆ ಮಾತನಾಡಬಾರದು. ತಮ್ಮ ಕ್ಷೇತ್ರದಲ್ಲಿದ್ದು ಜನರ ಸೇವೆ ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ. ಪದೇ ಪದೇ ಇಂತಹ ಹೇಳಿಕೆಗಳಿಂದ ಪಕ್ಷದ ಘನತೆಗೆ ಧಕ್ಕೆಯಾಗುತ್ತದೆ. ಆರಿಸಿ ಕಳಿಸಿರುವ ಜನರ ಸೇವೆ ಮಾಡಬೇಕಾಗಿರೋದು ನಮ್ಮ ಕರ್ತವ್ಯ.
ಬಿ.ವೈ. ವಿಜಯೇಂದ್ರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಬಾರದು. ಅವರು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಅವಶ್ಯಕತೆ ಇಲ್ಲ. ನಾಲ್ಕು ಬಾರಿ ಸಿಎಂ ಆಗಿ ಯಡಿಯೂರಪ್ಪ ಅವರು ಕೆಲಸ ಮಾಡುತ್ತಿದ್ದಾರೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಕೆಲವರು ವಿಜಯೇಂದ್ರರ ಹೆಸರನ್ನು ಹೇಳಿಕೊಂಡು ಕೆಲಸ ಮಾಡುತ್ತಿದ್ದಾರೆ ಇದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.