ಗಂಗಾವತಿ: ಸ್ಥಳೀಯರಿಗೆ ಮುನ್ಸೂಚನೆ ನೀಡದೇ ವಿವಾದಿತ ಭೂಮಿಯಲ್ಲಿ ದಿಢೀರ್ ಪ್ರವೇಶಿಸಿ ಹದ್ದುಬಸ್ತ್ ಮಾಡಲು ಯತ್ನಿಸಿದ ತಹಶಿಲ್ದಾರ್ ಹಾಗೂ ಕಂದಾಯ ಸಿಬ್ಬಂದಿಯನ್ನು ಸಾರ್ವಜನಿಕರು ಕೂಡಿ ಹಾಕಿ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಕಾರಟಗಿಯಲ್ಲಿ ನಡೆದಿದೆ. ಸ್ವತಃ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸುಗೂರು ಸಮ್ಮುಖದಲ್ಲಿ ಈ ಘಟನೆ ನಡೆದಿದೆ.
ಜನರ ಆಕ್ರೋಶದ ಮುಂದೆ ಶಾಸಕ ಹಾಗೂ ಅಧಿಕಾರಿಗಳು ನಿರುತ್ತರವಾಗಿದ್ದರು. ಕಾರಟಗಿ ತಾಲೂಕಿನ ಜೂರಟಗಿ ಗ್ರಾಮದ ಸrರ್ವೇ ನಂಬರ್ 11ರಲ್ಲಿ ಈ ಘಟನೆ ನಡೆದಿದೆ. ಉದ್ದೇಶಿತ ಈ ಜಮೀನು ವಿವಾದಲ್ಲಿದ್ದು, ಸ್ಥಳೀಯರ ಪ್ರಕಾರ ಪಟ್ಟಾ ಭೂಮಿ ಇದು. ಇನ್ನಷ್ಟು ಸರ್ಕಾರಿ ಭೂಮಿ ಇದ್ದು, ಇಲ್ಲಿ ದಶಕಗಳ ಕಾಲದಿಂದ ಬಡವರು ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಇದೀಗ ಏಕಾಏಕಿ ಶಾಸಕರ ಕುಮ್ಮಕ್ಕಿನಿಂದ ಅಧಿಕಾರಿಗಳು ಭೂಮಿಗೆ ಪ್ರವೇಶಿಸಿದ್ದಾರೆ.
ಮುಳ್ಳುಕಂಟಿಗಳನ್ನು ತೆರವು ಮಾಡಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಯತ್ನಿಸಿದ್ದಾರೆ. ಭವನ ನಿರ್ಮಾಣಕ್ಕೆ ನಮ್ಮದೇನೂ ತಕರಾರು ಇಲ್ಲ. ಆದರೆ ವಿವಾದಿತ ಭೂಮಿಯನ್ನು ಮೊದಲು ಸಮೀಕ್ಷೆ ಮಾಡಿಸಿ ಹದ್ದುಬಸ್ತು ಮಾಡಿಕೊಡಬೇಕು. ಬಳಿಕವಷ್ಟೇ ಅವಕಾಶ ನೀಡುವುದಾಗಿ ಸ್ಥಳೀಯರು ಪಟ್ಟು ಹಿಡಿದರು. ಅಧಿಕಾರಿಗಳು ಕೆಲಸ ಅರ್ಧಕ್ಕೆ ಸ್ಥಗಿತಗೊಳಿಸಿ ವಾಪಸ್ ಆದರು.
ಇದನ್ನೂ ಓದಿ: ಕೋಲಾರದಲ್ಲಿ ಒತ್ತುವರಿ ತೆರವು ವೇಳೆ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನ