ಗಂಗಾವತಿ: ತುಂಗಭದ್ರಾ ಎಡದಂಡೆ ವ್ಯಾಪ್ತಿಯಲ್ಲಿ ಬೆಳೆದಿರುವ ಎರಡನೇ ಬೆಳೆಗೆ ಮುಖ್ಯ ಕಾಲುವೆಯಿಂದ ಎಪ್ರಿಲ್ 10ರವರೆಗೆ ಅಲ್ಲ 15 ರವರೆಗೂ ನೀರು ಹರಿಸಲು ಶತ ಯತ್ನ ಮಾಡುತ್ತೇನೆ ಎಂದು ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸ್ಗೂರು ಹೇಳಿದರು.
ತಾಲೂಕಿನ ಹಣವಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ನವರು ಮಾಡುತ್ತಿರುವ ಹೋರಾಟ, ಪ್ರತಿಭಟನೆ ಕೇವಲ ರಾಜಕೀಯ ಪ್ರೇರಿತ. ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶಕ್ಕೆ ಒಮ್ಮೆಯಾದರೂ ಅವರು ನೈಜ ಕಾಳಜಿ ಪ್ರದರ್ಶಿಸಲಿ ಎಂದು ಪರೋಕ್ಷವಾಗಿ ಮಾಜಿ ಸಚಿವ ಶಿವರಾಜ ತಂಗಡಗಿಯನ್ನು ಟೀಕಿಸಿದರು.
ಕಳೆದ ಒಂಭತ್ತು ವರ್ಷದ ಇತಿಹಾಸದಲ್ಲಿ ಪ್ರತಿ ವರ್ಷವೂ ಮಾರ್ಚ್ 30ರವರೆಗೆ ಮಾತ್ರ ನೀರು ಹರಿಸಿರುವ ದಾಖಲೆ ಇವೆ. ಇದರ ಹೊರತಾಗಿಯೂ ಬಿಜೆಪಿ ಸರ್ಕಾರ ಮತ್ತು ಸಿಎಂ ಯಡಿಯೂರಪ್ಪ ಅವರು ರೈತರ ಪರವಾಗಿ ಇದ್ದೇವೆ ಎಂಬ ಸಾಬೀತು ಮಾಡುವ ಉದ್ದೇಶಕ್ಕೆ ಏಪ್ರಿಲ್ 15ರವರೆಗೂ ನೀರು ಹರಿಸುತ್ತೇವೆ ಎಂದರು.