ಕುಷ್ಟಗಿ (ಕೊಪ್ಪಳ): ಕುಷ್ಟಗಿಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹೆಸರಿಗೆ ಮಾತ್ರ ವಿದ್ಯಾ ಮಂದಿರ. ಆದರೆ, ರಾತ್ರಿಯಾಗುತ್ತಿದ್ದಂತೆ ಕಾಲೇಜು ಆವರಣವು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗುತ್ತದೆ.
ಈ ಕಾಲೇಜಿನ ಸುತ್ತಲೂ ಗೋಡೆಯಿದ್ದರೂ ಕಿಡಿಗೇಡಿಗಳು ಗೋಡೆ ಜಿಗಿದು ಬಹಿರ್ದಸೆ ಮಾಡುತ್ತಿದ್ದಾರಂತೆ. ಅಷ್ಟೇ ಅಲ್ಲದೆ, ಸಂಜೆಯಾಗುತ್ತಿದ್ದಂತೆ ವ್ಯಸನಿಗಳು ಮದ್ಯಪಾನ ಮಾಡಲು, ಸಿಗರೇಟ್ ಸೇದಲು ಇದೇ ಕಾಲೇಜಿನ ಆವರಣಕ್ಕೆ ಬರುತ್ತಾರೆ. ಇನ್ನು ಲಾಕ್ಡೌನ್ ಅವಧಿಯಲ್ಲಿ ಇದರ ಹಾವಳಿ ಮಿತಿ ಮೀರಿದೆ. ಈ ಕಾಲೇಜಿನ ಹೊಸ ಕಟ್ಟಡದಲ್ಲಿ ಮಾಂಸಾಹಾರ ಊಟ ತಂದು ಎಸೆದುಹೋಗುತ್ತಿದ್ದಾರೆ ಎಂದು ಇಲ್ಲಿನ ಜನರು ಆರೋಪಿಸಿದ್ದಾರೆ.
ಪ್ರತೀ ದಿನ ಪುಂಡರ ಕಾಟದಿಂದ ಇಲ್ಲಿನ ಸಿಬ್ಬಂದಿ ಕಷ್ಟ ಅನುಭವಿಸುತ್ತಿದ್ದಾರೆ. ಏಕೆಂದರೆ, ಮದ್ಯದ ಬಾಟಲಿ, ಪಾರ್ಸೆಲ್ ವಸ್ತುಗಳನ್ನು ತೆಗೆದು ಕಾಲೇಜನ್ನು ಸ್ವಚ್ಛ ಮಾಡುವ ಕಾರ್ಯ ಇವರೇ ಮಾಡಬೇಕಾಗಿದೆ.
ಈ ಕುರಿತು ಕಾಲೇಜಿನ ಪ್ರಾಚಾರ್ಯ ಡಾ.ಎಚ್. ಜಿ. ನೀರಗೇರಿ ಮಾತನಾಡಿದ್ದು, ಕಾಲೇಜು ಆವರಣದಲ್ಲಿ ಕಿಡಿಗೇಡಿಗಳ ಹಾವಳಿ ಮಿತಿ ಮೀರಿದೆ. ಸ್ಥಳೀಯರು ಕಾಲೇಜಿನ ಬಗ್ಗೆ ಅಭಿಮಾನ ಮೂಡಿಸಲು ಪ್ರಯತ್ನಿಸಿದರೆ, ಈ ರೀತಿಯ ಅನಾಗರಿಕ ವರ್ತನೆ ನಿಯಂತ್ರಿಸಲು ಸಾಧ್ಯ ಎಂದು ಹೇಳಿದ್ದಾರೆ.