ಗಂಗಾವತಿ: ನಗರದಲ್ಲಿ ವಾಹನ ಮತ್ತು ಜನ ಸಂಚಾರ ಹೆಚ್ಚಾಗಿದೆ. ಕೆಲ ಪ್ರಮುಖ ಸ್ಥಳಗಳಲ್ಲಿ ಜನದಟ್ಟಣೆ ಹೆಚ್ಚಾಗುತ್ತಿರುವುದು ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ನಗರದ ಎಪಿಜೆ ಅಬ್ದುಲ್ ಕಲಾಂ ಸಮಾಜ ಸೇವಾ ಸಂಸ್ಥೆಯ ಪದಾಧಿಕಾರಿಗಳು ಹೇಳಿದರು.
ಗಂಗಾವತಿ ಉಪ ವಿಭಾಗದ ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ ಅವರನ್ನು ಭೇಟಿ ಮಾಡಿದ ಸಂಘಟನೆಯ ಸಂಚಾಲಕ ಮುಕ್ತಿಯಾರ್ ಹುಸೇನ್, ನಗರದಲ್ಲಿ ವಾಹನ ಸಂಚಾರದ ದಟ್ಟಣೆ ತಡೆಯಬೇಕು. ಇದರಿಂದ ಸೋಂಕು ಹರಡುವುದನ್ನು ತಡೆಗಟ್ಟಿದಂತಾಗುತ್ತದೆ ಎಂದು ಮನವಿ ಮಾಡಿದರು.
ಮುಖ್ಯವಾಗಿ ನಗರದ ಕೇಂದ್ರ ಭಾಗವಾದ ಮಹಾವೀರ ವೃತ್ತ, ಮಹಾತ್ಮಗಾಂಧಿ ವೃತ್ತ, ಸಿಬಿಎಸ್, ಜುಲೈನಗರ ಮೊದಲಾದ ಸ್ಥಳಗಳಲ್ಲಿ ಜನ ಅಂತರವಿಲ್ಲದೇ ಓಡಾಡುತ್ತಾರೆ ಮತ್ತು ಮಾಸ್ಕ್ ಧರಿಸುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.