ಕೊಪ್ಪಳ: ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಗೆ ಕೊಪ್ಪಳದ ಕುವೆಂಪು ನಗರದಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಜನಜೀವನಕ್ಕೆ ತೊಂದರೆಯಾಗಿದೆ.
ಮನೆಯೊಳಗೆ ಮಳೆ ನೀರು ನುಗ್ಗಿದ ಹಿನ್ನಲೆ ಕೂಡಿಟ್ಟಿದ್ದ ಧವಸ ಧಾನ್ಯ ನೀರು ಪಾಲಾಗಿದೆ. ಮನೆಯಲ್ಲಿ ಕುಳಿತುಕೊಳ್ಳಲು, ನಿಲ್ಲಲೂ ಜಾಗವಿಲ್ಲದೆ ಇಡೀ ರಾತ್ರಿ ನಿವಾಸಿಗಳು ಜಾಗರಣೆ ಮಾಡುವಂತ ಪರಿಸ್ಥಿತಿ ಎದುರಾಗಿದೆ. ನೀರನ್ನು ಮನೆಯಿಂದ ಹೊರ ಹಾಕಲು ಜನ ಹರಸಾಹಸ ಪಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ರಾತ್ರಿ ಪೂರ್ತಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಜೊತೆಗೆ ಗುಂಡೂರು-ಲಕ್ಷ್ಮೀ ಕ್ಯಾಂಪ್ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಲಕ್ಷ್ಮೀ ಕ್ಯಾಂಪ್ ಮತ್ತು ಗುಂಡೂರಿನ ನಡುವಿನ ಸಂಪರ್ಕ ಕಡಿತಗೊಂಡಿದೆ. ಜೊತೆಗೆ ಕುಷ್ಟಗಿ ತಾಲೂಕಿನ ಕಂದಕೂರು ನಾಗರಾಳ ಮಧ್ಯದಲ್ಲಿರುವ ಹಳ್ಳ ಭೋರ್ಗರೆಯುತ್ತಿದ್ದು ಅಲ್ಲಿಯೂ ಕೂಡ ಸಂಪರ್ಕ ಕಡಿತಗೊಂಡಿದೆ.