ಗಂಗಾವತಿ (ಕೊಪ್ಪಳ) : ನಕಲಿ ವಿಳಾಸ ನೀಡಿ ಕಳಪೆ ಗುಣಮಟ್ಟದ ಕೀಟನಾಶಕವನ್ನು ತಯಾರಿಸಿ ಮಾರಾಟ ಮಾಡಿ ರೈತರಿಗೆ ವಂಚಿಸುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಗಂಗಾವತಿ ತಾಲೂಕಿನ ಕೃಷಿ ಇಲಾಖೆ ಜಾರಿದಳ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಗಂಜ್ ಪ್ರದೇಶದಲ್ಲಿರುವ ಕೀಟನಾಶಕ ಮಾರಾಟ ಅಂಗಡಿ ಮೇಲೆ ದಾಳಿ ಮಾಡಿದ ಜಾರಿದಳ ವಂಚನೆ ಪ್ರಕರಣವನ್ನು ಬಯಲಿಗೆಳೆದಿದೆ. ತಕ್ಷಣಕ್ಕೆ ನಕಲಿ ಕೀಟನಾಶಕ ದಾಸ್ತಾನು ಕಂಡು ಬಂದಿರಲಿಲ್ಲ. ಆದರೆ ಮಾರಾಟದ ದಾಖಲೆಗಳನ್ನು ಪರಿಶೀಲಿಸಿದಾಗ ಅಧಿಕಾರಿಗಳಿಗೆ ಅನುಮಾನ ಬಂದಿತ್ತು.
ಅಂಗಡಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಕನಕಗಿರಿ ತಾಲೂಕಿನ ನವಲಿ ಹೋಬಳಿಯ ಆದಾಪುರದ ಕೀಟನಾಶಕ ತಯಾರಿಕಾ ಘಟಕದಿಂದ ಖರೀದಿಸಿದ್ದಾಗಿ ಮಾಲೀಕರು ಮಾಹಿತಿ ನೀಡಿದ್ದಾರೆ. ಪರಿಶೀಲಿಸಿದಾಗ ಅಂಗಡಿ ಮಾಲೀಕರು ನೀಡಿರುವುದು ನಕಲಿ ವಿಳಾಸ, ನಕಲಿ ಕಂಪನಿಯ ಹೆಸರು ಎನ್ನುವುದು ಗೊತ್ತಾಗಿದೆ. ಬೇರೆ ಸ್ಥಳದಲ್ಲಿ ನಕಲಿ ಕೀಟನಾಶ ತಯಾರಿಸಿ ತಂದು ಮಾರಾಟ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶ ಪ್ರವಾಸದ ಆಮಿಷ: ಕೀಟನಾಶಕವನ್ನು ಹೆಚ್ಚು ಮಾರಾಟ ಮಾಡಿದ ಗೊಬ್ಬರ ಕಂಪನಿಗಳ ಮಾಲೀಕರು ಅಥವಾ ಮಾರಾಟ ಪ್ರತಿನಿಧಿಗಳಿಗೆ ವಿದೇಶಿ ಪ್ರವಾಸಕ್ಕೆ ಕರೆದೊಯ್ಯುವುದಾಗಿ ನಕಲಿ ಕೀಟ ನಾಶಕ ಕಂಪನಿಯಿಂದ ಆಮಿಷವೊಡ್ಡಲಾಗಿತ್ತು ಎನ್ನಲಾಗಿದೆ. ಒಂದು ಲೀಟರ್ ಕೀಟನಾಶಕಕ್ಕೆ ಸಾವಿರಾರು ರೂ ಬೆಲೆ ನಿಗದಿ ಮಾಡಲಾಗಿದೆ. ರೈತರಿಗೆ ಬಣ್ಣದ ಮಾತುಗಳಿಂದ ವಂಚಿಸುತ್ತಿದ್ದ ವ್ಯವಸ್ಥಿತ ಜಾಲ ಸಕ್ರಿಯವಾಗಿದೆ ಎಂಬ ಸಂಗತಿ ಮೇಲ್ನೋಟಕ್ಕೆ ಲಭಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಕಲಿ ಕಂಪನಿಯಿಂದ ಖರೀದಿಸಿದ್ದು ಎಂದು ಹೇಳಲಾದ 86 ಸಾವಿರ ರೂಪಾಯಿ ಮೌಲ್ಯದ 40 ಲೀಟರ್ ನಕಲಿ ಕೀಟನಾಶಕ ವಶಕ್ಕೆ ಪಡೆಯಲಾಗಿದೆ ಎಂದು ಜಾರಿ ದಳದ ಸಹಾಯಕ ನಿರ್ದೇಶಕ ನಿಂಗಪ್ಪ ತಿಳಿಸಿದರು.
ದಾಸ್ತಾನು ಜಪ್ತಿ ಮಾಡಿ, ಅಂಗಡಿಯ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು. ಅವರು ಗುಜರಾತಿನಿಂದ ಕಚ್ಚಾವಸ್ತುಗಳನ್ನು ಖರೀದಿಸಿ ಕೀಟನಾಶಕ ತಯಾರಿಸಿ ಬೇರೆ ಹೆಸರಲ್ಲಿ ಮಾರಾಟ ಮಾಡುತ್ತಿರುವ ಸಂಶಯವಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: ಟಿವಿ ನೋಡುತ್ತಿದ್ದಾಗ ಮಕ್ಕಳ ನಡುವೆ ಗಲಾಟೆ; ತಾಯಿ ಕೆನ್ನೆಗೆ ಬಾರಿಸಿದರೆಂದು ಮಗ ಆತ್ಮಹತ್ಯೆ