ಕೋಲಾರ: ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ವಿರುದ್ಧ ಮಾತನಾಡಿ ಅಮಾನತುಗೊಂಡಿದ್ದ ಕಾಂಗ್ರೆಸ್ ಮುಖಂಡರು ಇದೀಗ ಉಲ್ಟಾ ಹೊಡೆದಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಈ ಕಾಂಗ್ರೆಸ್ ಮುಖಂಡರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ವಿರುದ್ಧ ಯಾವುದೇ ಹೇಳಿಕೆಗಳನ್ನ ಕೊಟ್ಟಿಲ್ಲವೆಂದು ಹೇಳಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮೋಸ ಮಾಡಿದವರ ಕುರಿತು ಕ್ರಮ ಕೈಗೊಳ್ಳಬೇಕೆಂದು ಸುದ್ದಿಗೋಷ್ಟಿ ನಡೆಸಿದ್ದೇವೆಯೇ ಹೊರತು ಕಾಂಗ್ರೆಸ್ ಹೈಕಮಾಂಡ್ ಹಾಗೂ ಉಸ್ತುವಾರಿ ವಿರುದ್ಧ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಕಲೀಲ್, ಹೈಕಮಾಂಡ್ ಕುರಿತು ಮಾತನಾಡುವಾಗ ಅವರನ್ನ ತಡೆದು ಹೊರ ಕಳುಹಿಸಲಾಗಿದೆ. ಹೀಗಾಗಿ ವಾಸ್ತವಾಂಶದ ಕುರಿತು ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ನೀಡಲಿದ್ದು, ಹೈಕಮಾಂಡ್ ಈ ಕುರಿತು ಪರಿಶೀಲನೆ ನಡೆಸಿ ಅಮಾನತು ರದ್ದುಗೊಳಿಸಬೇಕೆಂದು ಮನವಿ ಮಾಡಿಕೊಳ್ಳುವುದಾಗಿ ಅಮಾನತುಗೊಂಡ ಕಾಂಗ್ರೆಸ್ ಮುಖಂಡರು ತೀರ್ಮಾನಿಸಿದ್ದಾರೆ.
ಇನ್ನು, ಕೆ ಸಿ ವೇಣುಗೋಪಾಲ್ರನ್ನ ರಾಜ್ಯ ಉಸ್ತುವಾರಿಯಿಂದ ತೆಗೆಯುವಂತೆ ಕೋಲಾರದ ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಟಿ ನಡೆಸಿ ಆಗ್ರಹಿಸಿದ್ರು ಎಂಬ ಆರೋಪ ಕೇಳಿಬಂದಿದತ್ತು. ಈ ಹಿನ್ನೆಲೆ ಕಾಂಗ್ರೆಸ್ ನಗರ ಅಧ್ಯಕ್ಷ ಪ್ರಸಾದ್ ಬಾಬು, ಕೆಯುಡಿಎ ಮಾಜಿ ಅಧ್ಯಕ್ಷ ಅತ್ತಾವುಲ್ಲ, ಜಯದೇವ್, ಕುಮಾರ್ ಸೇರಿದಂತೆ 7 ಜನರನ್ನ ಉಚ್ಛಾಟನೆ ಮಾಡಲಾಗಿದೆ.