ಕೋಲಾರ : ಗ್ರಾಪಂ ಪುನರ್ವಿಂಗಡಣೆ ಸಮಯದಲ್ಲಿ ಅಧಿಕಾರಿಗಳು ಮಾಡಿದ ಯಡವಟ್ಟಿನಿಂದ ಬಂಗಾರಪೇಟೆ ತಾಲೂಕು ಕಾಮಸಮುದ್ರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಡಗುರ್ಕಿ ಗ್ರಾಮಕ್ಕೆ ಆ ಒಂದು ಸರ್ಕಾರದ ಯೋಜನೆ ಇಲ್ಲದಂತಾಗಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಪಂಚಾಯತ್ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
2015ರಲ್ಲಿ ಗ್ರಾಮಗಳ ಪುನರ್ವಿಂಗಡಣೆ ವೇಳೆ ಗಟ್ಟಮಾದಮಂಗಲ ಗ್ರಾಪಂ ವ್ಯಾಪ್ತಿಯಲ್ಲಿದ್ದ ಈ ಬೋಡಗುರ್ಕಿ ಗ್ರಾಮವನ್ನು ಕಾಮಸಮುದ್ರ ಗ್ರಾಪಂ ವ್ಯಾಪ್ತಿಗೆ ಸೇರಿಸಲು ಮನವಿ ಮಾಡಲಾಗಿತ್ತು.
ಇದರಂತೆ ಕಾಮಸಮುದ್ರ ವ್ಯಾಪ್ತಿಗೆ ಸೇರ್ಪಡೆಯಾಗಿದೆ. ಆದರೆ, ಉದ್ಯೋಗ ಖಾತ್ರಿ ಯೋಜನೆ ವರ್ಗಾವಣೆ ವೇಳೆ ತಾಂತ್ರಿಕ ದೋಷದಿಂದ ಈ ಗ್ರಾಮದಲ್ಲಿ ಜಾಬ್ ಕಾರ್ಡ್ ನೀಡುತ್ತಿಲ್ಲ.
ಜೊತೆಗೆ ಉದ್ಯೋಗ ಖಾತ್ರಿ ಯೋಜನೆ ಕೆಲಸಗಳೂ ಮಾಡುತ್ತಿಲ್ಲ. ಇದರಿಂದ ಬೇಸತ್ತ ಜನರು ಇದನ್ನು ಸರಿಪಡಿಸುವವರೆಗೂ ಮತ ಚಲಾಯಿಸದೆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ನಿರ್ಧಾರ ಮಾಡಿದ್ದಾರೆ.
ಬೋಡಗುರ್ಕಿ ಗ್ರಾಮವನ್ನು ಕೆಜಿಎಫ್ ತಾಲೂಕು ಗಟ್ಟಮಾದಮಂಗಲ ಗ್ರಾಪಂ ವ್ಯಾಪ್ತಿಯಿಂದ ಬಂಗಾರಪೇಟೆ ತಾಲೂಕು ಕಾಮಸಮುದ್ರ ಗ್ರಾಪಂ ವ್ಯಾಪ್ತಿಗೆ 2015ರಲ್ಲಿ ರಾಜ್ಯಪತ್ರದಲ್ಲೇ ಆದೇಶ ಹೊರಡಿಸಿ ವರ್ಗಾವಣೆ ಮಾಡಿದೆ. ಇದಾದ ನಂತರ ನಡೆದ ಚುಣಾವಣೆಯಲ್ಲಿ ಇದೇ ಗ್ರಾಮದಲ್ಲಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿ ಗೆದ್ದಿದ್ದಾರೆ.
ಕಳೆದ ಬಾರಿ ಇದೇ ಗ್ರಾಮದ ಒಬ್ಬ ಸದಸ್ಯೆ ಉಪಾದ್ಯಕ್ಷೆಯಾಗಿ ಕೂಡ ಕೆಲಸ ಮಾಡಿದ್ದಾರೆ. ಜೊತೆಗೆ ಸಾಕಷ್ಟು ಅಭಿವೃದ್ದಿ ಕೆಲಸಗಳು ಕೂಡ ಮಾಡಲಾಗಿದೆ. ಅದಕ್ಕೆ ಬೇಕಾದ ದಾಖಲಾತಿಗಳು ಕಾಮಸಮುದ್ರ ಗ್ರಾಮ ಪಂಚಾಯತ್ನಲ್ಲಿವೆ.
ಆದರೆ, ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ತಂತ್ರಾಂಶದ ತೊಂದರೆ ಮಾತ್ರ ಬಗೆಹರಿದಿಲ್ಲ. ಈ ಸಮಸ್ಯೆ ಬಗೆಹರಿಸಲು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಅನ್ನೋದು ಅಧಿಕಾರಿಗಳ ಮಾತು. ಇಷ್ಟಾದ್ರೂ ಸದ್ಯ ಇದೇ ವಿಷಯ ಬೋಡಗುರ್ಕಿ ಗ್ರಾಮದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.