ಕೋಲಾರ:ಈ ಲೋಕಸಭಾ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆ. ಆದ್ರೆ ಈ ಬಾರಿ ಕಾಂಗ್ರೆಸ್ನಲ್ಲಿ ಆರಂಭದಿಂದಲೂ ಅಪಸ್ವರ ಕೇಳಿಬರುತ್ತಿದ್ದು, ಬಂಡಾಯದ ಬಿಸಿ ತಾರಕಕ್ಕೇರಿದೆ. ನಾಮಪತ್ರ ಪ್ರಕ್ರಿಯೆ ಮುಗಿದರೂ ಹೊತ್ತಿ ಉರಿಯುತ್ತಿರುವ ಬೆಂಕಿ ಮಾತ್ರ ತಣ್ಣಗಾಗುವ ಲಕ್ಷಣಗಳು ಕಂಡುಬರುತ್ತಿಲ್ಲ.
ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು, ಒಂದು ಕಡೆ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಶಾಸಕ ಹಾಗೂ ಇನ್ನೆರಡು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಹಾಗಾಗಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ಬೇಕಾದ ವಾತಾವರಣ ಇದೆ. ಹೀಗಿದ್ದರೂ ಕಾಂಗ್ರೆಸ್ನಲ್ಲಿ ಆತಂಕ ಮಾತ್ರ ದೂರವಾಗಿಲ್ಲ. ಇದಕ್ಕೆ ಕಾರಣ ಪಕ್ಷದಲ್ಲಿನ ಸ್ವಪಕ್ಷೀಯರ ವಿರೋಧ, ಹಾಲಿ ಕಾಂಗ್ರೆಸ್ ಅಭ್ಯರ್ಥಿ ವಿರೋಧಿ ಅಲೆ ಹಾಗೂ ಪಕ್ಷದಲ್ಲಿ ಹೊತ್ತಿ ಉರಿಯುತ್ತಿರುವ ಭಿನ್ನಮತ ಎನ್ನಲಾಗುತ್ತಿದೆ.
ಸದ್ಯ ಇದು ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್. ಮುನಿಯಪ್ಪಗೆ ತಲೆನೋವಾಗಿ ಪರಿಣಮಿಸಿದೆ. ಏಳು ಬಾರಿ ಇಲ್ಲಿ ಸಂಸದರಾಗಿ ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಮಾಡದೆ, ಪಕ್ಷದ ಕೆಲವು ಮುಖಂಡರನ್ನೇ ತುಳಿದಿದ್ದಾರೆ ಎನ್ನುವ ಕಾರಣಕ್ಕೆ ನಾಮಪತ್ರ ಸಲ್ಲಿಸುವ ವೇಳೆಯಲ್ಲೂ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡರನ್ನು ಹೊರತುಪಡಿಸಿ ಯಾವೊಬ್ಬ ಶಾಸಕ ಜೊತೆಗಿರಲಿಲ್ಲ. ನಾವು ಎಲ್ಲರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದ್ರೂ ಯಾರೊಬ್ಬರೂ ಸಂಪರ್ಕಕ್ಕೆ ಸಿಗಲಿಲ್ಲ. ಕಾಂಗ್ರೆಸ್ನಂತಹ ದೊಡ್ಡ ಪಕ್ಷದಲ್ಲಿ ಭಿನ್ನಮತ ಸಾಮಾನ್ಯ. ಎಲ್ಲವೂ ಸರಿ ಹೋಗುತ್ತದೆ ಅಂತಾರೆ ಮುನಿಯಪ್ಪ.
ಆದ್ರೆ ಮುನಿಯಪ್ಪನವರೇ ಹೇಳುವಂತೆ ಟಿಕೆಟ್ ಹಂಚಿಕೆ ಹಂತದಿಂದ ಹಿಡಿದು ನಾಮಪತ್ರ ಸಲ್ಲಿಸುವವರೆಗೂ ಶಾಸಕರುಗಳಾದ ರಮೇಶ್ ಕುಮಾರ್, ವಿ.ಮುನಿಯಪ್ಪ, ಎಸ್.ಎನ್.ನಾರಾಯಣಸ್ವಾಮಿ, ಶ್ರೀನಿವಾಸಗೌಡ, ಹೆಚ್.ನಾಗೇಶ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಮಾಲೂರು ಮಂಜುನಾಥ್ ಎಲ್ಲರೂ ಬಹಿರಂಗವಾಗಿಯೇ ಮುನಿಯಪ್ಪ ವಿರುದ್ಧ ತೊಡೆ ತಟ್ಟಿದ್ದಾರೆ. ಅಲ್ಲದೆ ಗುಪ್ತ ಸಭೆಗಳನ್ನು ಕೂಡಾ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ ಮಾತ್ರ ಅದು ಕೇವಲ ಟಿಕೆಟ್ ಹಂಚಿಕೆ ಸಮಯದಲ್ಲಿ ಇತ್ತು. ಈಗ ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ. ಯಾರಾದರೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳ್ತಾರೆ.