ಕೊಡಗು: ಮಡಿಕೇರಿ ನಗರದಲ್ಲಿ 2017-18ನೇ ಸಾಲಿನ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ಥರಾಗಿ ಪುನರ್ವಸತಿ ಪಡೆದುಕೊಂಡಿದ್ದವರು ತಮ್ಮ ಹಳೆಯ ಮನೆಗಳನ್ನು ನೆಲಸಮ ಮಾಡುವಂತೆ ನಗರಸಭೆ ನೋಟಿಸ್ ನೀಡಿದೆ. ಆದರೆ ಕೊರೊನಾ ಸಂಕಷ್ಟ ಕಾಲದಲ್ಲಿ ಜೀವನ ಮಾಡುವುದೇ ದುಸ್ತರವಾಗಿರುವಾಗ ಅದು ನಮ್ಮಿಂದ ಕಷ್ಟಸಾಧ್ಯ. ಕನಿಷ್ಠ ಮೂರು ತಿಂಗಳ ಕಾಲಾವಕಾಶ ಕೊಡಿ ಎಂದು ಪುನರ್ವಸತಿ ಪಡೆದಿರುವ ಫಲಾನುಭವಿಗಳು ಒತ್ತಾಯಿಸಿದ್ದಾರೆ.
ಮಡಿಕೇರಿಯ ಚಾಮುಂಡೇಶ್ವರಿ, ಜ್ಯೋತಿ ಹಾಗೂ ಇಂದಿರಾನಗರದಲ್ಲಿನ ಸುಮಾರು 119 ಮನೆಗಳಿಗೆ ಉಪ ವಿಭಾಗಾಧಿಕಾರಿ ಸೂಚನೆಯಂತೆ ನಗರಸಭೆ ನೋಟಿಸ್ ನೀಡಿದೆ. ಶೀಘ್ರವಾಗಿ ಮನೆಗಳನ್ನು ಕೆಡವಲು ಸೂಚಿಸಲಾಗಿದೆ. ಮನೆ ಕೆಡವುದರೊಂದಿಗೆ ನೀರಿನ ಬಿಲ್ ಹಾಗೂ ಕಂದಾಯವನ್ನು ಕಚೇರಿಗೆ 7 ದಿನಗಳೊಳಗೆ ಪಾವತಿಸಲು ಗಡುವನ್ನು ಕೂಡ ನೀಡಿದೆ. ಮೊದಲೆ ಆರ್ಥಿಕ ಮುಂಗಟ್ಟಿನಿಂದ ಕಂಗೆಟ್ಟಿರುವ ನಿವಾಸಿಗಳು ಸೂಚನೆಯಿಂದ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಸರ್ಕಾರದಿಂದ 119 ಕುಟುಂಬಕ್ಕೆ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದ ಜಂಬೂರುವಿನಲ್ಲಿ ಮನೆಗಳನ್ನು ನೀಡಿದ್ದು ಈಗಾಗಲೇ ಅವರು ಸ್ಥಳಾಂತರಗೊಂಡಿದ್ದಾರೆ. ಸದ್ಯ ತಮ್ಮ ಖಾಲಿ ಮನೆಯನ್ನು ಕೆಡವಲು ನಗರಸಭೆ ಸೂಚನೆ ನೀಡಿದೆ. ಆದ್ರೆ ಜಂಬೂರುವಿನಲ್ಲಿ ಅಧಿಕ ಜನರು ಕೂಲಿ ಕಾರ್ಮಿಕರಿದ್ದಾರೆ. ಮನೆ ನೆಲಸಮಕ್ಕೆ ಕನಿಷ್ಠ 15 ಸಾವಿರ ರೂ. ಬೇಕು. ಆದ್ರೆ ಕೊರೊನಾ ಸಂಕಷ್ಟದಿಂದ ಬಳಲುತ್ತಿದ್ದು ಮಾರ್ಚ್ ಅಂತ್ಯದವರೆಗೆ ಕಾಲಾವಕಾಶಕ್ಕೆ ಮನವಿ ಮಾಡಿದ್ದಾರೆ.
ಓದಿ: ಸಿಎಂ ಯಡಿಯೂರಪ್ಪ ಆಡಳಿತದ ಪ್ರಮುಖ ನಿರ್ಧಾರಗಳ ಕುರಿತು ವರ್ಷದ ಪಕ್ಷಿನೋಟ..!
ಪುನರ್ವಸತಿ ಪಡೆದುಕೊಂಡಿರುವ ಯಾರೂ ಕೂಡ ಹಳೆ ಮನೆಯಲ್ಲಿ ವಾಸವಾಗಿಲ್ಲ. ಅವರು ನೀರಿನ ಬಿಲ್ ಹಾಗೂ ಕಂದಾಯ ಪಾವತಿಸಿದ ನಂತರ ಅವರಿಗೆ ಮತದಾರರ ಚೀಟಿ, ರೇಷನ್ ಕಾರ್ಡ್ ವರ್ಗಾಯಿಸಲು ಸೂಚಿಸಿದ್ದೇವೆ. ಕೆಡವಲು ಸೂಚಿಸಿರುವ ಮನೆಗಳು ಇರುವ ಪ್ರದೇಶವನ್ನು ಅಪಾಯಕಾರಿ ಪ್ರದೇಶವೆಂದು ಗುರುತಿಸಲಾಗಿದೆ. ಆದರಿಂದ ಇಲ್ಲಿ ವಾಸ ಮಾಡುವಂತೆ ಇಲ್ಲ. ಮುಂದೊಂದು ದಿನ ಅರಣ್ಯ ಇಲಾಖೆಯಿಂದ ಇಲ್ಲಿ ಗಿಡ ಬೆಳೆಸುವ ಯೋಜನೆ ಇದೆ. ಈಗಾಗಲೇ ಖಾಲಿ ಇರುವ ಮನೆಗಳಲ್ಲಿ ಕೆಲವರು ಬಾಡಿಗೆಗೆ ವಾಸಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ ಎನ್ನುತ್ತಾರೆ ನಗರಸಭೆ ಆಯುಕ್ತರಾದ ರಾಮದಾಸ್.