ಕೊಡಗು: ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಅಲ್ಲಿನ ಜನ ತತ್ತರಿಸಿ ಹೋಗಿದ್ದಾರೆ. ಸಂತ್ರಸ್ತರಾದ ಜನತೆಗೆ ಸಹನೆ ಕಟ್ಟೆಯೊಡೆದಿದೆ. ಒಂದು ಮಳೆ ಮುಗಿದು ಮತ್ತೊಂದು ಮಳೆ ಆರಂಭವಾದರೂ ಮನೆ ಕಳೆದುಕೊಂಡವರಿಗೆ ಮನೆ ಸಿಕ್ಕಿಲ್ಲ. ಬೆಳೆ ನಷ್ಟ ಆದವರಿಗೆ ಅದರ ಪರಿಹಾರ ಸಿಗದೆ ಇರುವುದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಇಂದು ಜಿಲ್ಲೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಾ ರಾ ಮಹೇಶ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು. ನಿರಾಶ್ರಿತರಿಗೆ ಆಶ್ರಯ ಮನೆ ನಿರ್ಮಿಸುತ್ತಿದ್ದ ತಾಲೂಕಿನ ಕರ್ಣಂಗೇರಿಗೆ ಭೇಟಿ ನೀಡಿ ಪರಿಶೀಲಿಸಿ ವಾಪಸ್ಸಾಗುತ್ತಿದ್ದ ಅಧಿಕಾರಿಗಳ ವಾಹನಗಳನ್ನು ಅಡ್ಡಗಟ್ಟಿದ ಜನರು ಜಿಲ್ಲಾಡಳಿತದ ವಿರುದ್ಧ ಗರಂ ಆದ್ರು. ಅಧಿಕಾರಿಗಳನ್ನು ರಸ್ತೆಯಲ್ಲಿ ಅಡ್ಡಗಟ್ಟಿದ ಸಂತ್ರಸ್ತರು ನೆರವು ಕೊಡುವಂತೆ ಒತ್ತಾಯಿಸಿದರು. ಸೂಕ್ತ ರೀತಿಯಲ್ಲಿ ಪರಿಹಾರ ಕೊಡಿ. ಇಲ್ಲಾ ನಾವೇನು ಅಂತಾ ತೋರಿಸ್ತೀವಿ ಅಂತಾ ತರಾಟೆಗೆ ತೆಗೆದುಕೊಂಡರು.
ಸಚಿವರು, ಡಿಸಿ, ಎಸ್ಪಿ, ಎಸಿ ಹಾಗೂ ಪೊಲೀಸ್ ವಾಹನಗಳನ್ನು ತಡೆದು ಜನರು ರಂಪಾಟ ನಡೆಸಿದರು. ಇದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸದ್ಯ ಸಂತ್ರಸ್ತರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರೋ ಸಚಿವ ಸಾ ರಾ ಮಹೇಶ್ ಜೂನ್ 3ರಂದು ಡಿಸಿ ಕಚೇರಿಯಲ್ಲಿ ಎಲ್ಲಾ ಸಂತ್ರಸ್ತರ ಸಭೆ ಕರೆಯುವ ಹಾಗೂ 15 ದಿನಗಳೊಳಗೆ ಕೊಡಗಿಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಕರೆತಂದು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.