ಕೊಡಗು: ನಾಪೋಕ್ಲುವಿನಲ್ಲಿ ನಡೆಯುತ್ತಿರುವ 23ನೇ ಕೊಡವ ಕೌಟುಂಬಿಕ ಹಾಕಿ ಟೂರ್ನಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಉದ್ಘಾಟಿಸಿದರು. ಕೊಡವ ಸಾಂಪ್ರದಾಯಿಕ ಉಡುಪು ತೊಟ್ಟು, ಕೊಡವ ಭಾಷೆಯಲ್ಲಿ ಮಾತು ಆರಂಭಿಸಿದ ಅವರು, ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಚಾಲನೆ ನೀಡಿದ್ದು ಎಲ್ಲರ ಗಮನ ಸೇಳೆಯಿತು.
ನಂತರ ಮಾತನಾಡಿದ ಅವರು, ಇದೊಂದು ವಿಶೇಷ ಕ್ರೀಡಾಕೂಟ, ಕೊಡಗಿನ ಎಲ್ಲ ಮನೆತನಗಳು ನಡೆಸುವ ಕ್ರೀಡಾಕೂಟವಾಗಿದೆ. ಕೊಡಗಿನ ಕುಟುಂಬಗಳು ಅತ್ಯಂತ ಒಳ್ಳೆಯ ಸಂಬಂಧಗಳನ್ನು ಹೊಂದಿರುವ ಕುಟುಂಬಗಳು, ನಿಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಎಲ್ಲರು ಗೌರವಿಸುವಂತವಾಗಿವೆ. ನಿಮ್ಮ ವೇಷಭೂಷಣ ಮತ್ತು ಆಹಾರದಿಂದ ಹಿಡಿದು ಎಲ್ಲವೂ ವಿಶೇಷವಾಗಿದೆ, ಹಾಕಿ ಕೊಡವರಿಗೆ ಅತ್ಯಂತ ಪ್ರೀಯವಾದ ಕ್ರೀಡೆಯಾಗಿದೆ ಎಂದರು.
ನಶಿಸಿ ಹೋಗುತ್ತಿರುವ ಕೊಡವ ಕುಟುಂಬಗಳ ನಡುವಿನ ಸಂಬಂಧ ಮತ್ತೆ ಬೆಸೆಯಲು ಕೌಟುಂಬಿಕ ಹಾಕಿ ಉತ್ಸವ ಸಹಕಾರಿಯಾಗಿದೆ ಇದನ್ನು 23 ವರ್ಷಗಳಿಂದ ಮಾದರಿಯಾಗಿ ನಡೆಸಿಕೊಂಡು ಬಂದಿದ್ದೀರಿ. ಹಾಕಿ ಕ್ರೀಡಾಕೂಟವನ್ನು ಪ್ರಾರಂಭ ಮಾಡಿದ ಹಿರಿಯರಿಂದ ಹಿಡಿದು ಇಂದಿನವರಿಗೆಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕುಟುಂಬಗಳು ಒಂದಾಗಬೇಕು, ಕುಟುಂಬಗಳ ಸಂಬಂಧ ಚೆನ್ನಾಗಿರಬೇಕು. ಇದು ನಮ್ಮ ಭಾರತದ ಪರಂಪರೆ ಎಂದು ಹೇಳಿದರು.
ಈ ಕೌಟುಂಬಿಕ ಹಾಕಿ ಉತ್ಸವ ಯಶಸ್ವಿಯಾಗಲಿ ಹೀಗೆ ನಿತ್ಯ ನಿರಂತರ ಮುಂದುವರಿಯಲಿ. ಕೆ.ಜಿ.ಬೋಪಯ್ಯ ಅವರು ಈ ಹಿಂದೆ ಕ್ರಿಕೆಟ್ ಕ್ರೀಡೆಗೆ ಅನುದಾನ ಕೋರಿ ಬಂದಿದ್ದರು, ನಾನು ಇಲ್ಲ ಎಂದು ಹೇಳಿ ಕಳಿಸಿದೆ. ಆದರೆ ಹಾಕಿ ಹಬ್ಬಕ್ಕೆ ಅನುದಾನ ಕೇಳಲು ಬಂದಾಗ ಅವರ ನಿರೀಕ್ಷೆ 50 ಲಕ್ಷ ಇತ್ತು. ಆದರೆ ನಾನು ಒಂದು ಕೋಟಿ ರೂಪಾಯಿಯನ್ನು ನೀಡಿದ್ದೇನೆ. ಇದಕ್ಕೆ ಕಾರಣ ಕೊಡಗಿನವರ ಕ್ರೀಡೆ ಹಾಕಿ ಎಂದು ನನಗೆ ತಿಳಿದಿದೆ. ಅದನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣಕ್ಕೆ ನನ್ನ ತಂದೆ ಎಸ್. ಆರ್ ಬೊಮ್ಮಾಯಿ ಸಚಿವರಾಗಿದ್ದಾಗ ಅನುದಾನ ನೀಡಿದ್ದರು. ಕೊಡವ ಅಭಿವೃದ್ಧಿ ನಿಗಮ ಆಗಬೇಕೆಂಬ ನಿಮ್ಮ ಬೇಡಿಕೆ ಇದೆ. ಕೊಡವ ಅಭಿವೖದ್ಧಿ ನಿಗಮ ಸ್ಥಾಪನೆಗೆ ನಾನು ಕೂಡಲೇ ಆದೇಶ ಹೊರಡಿಸುತ್ತೇನೆ ಎಂದು ಭರವಸೆ ನೀಡಿ, ಕರ್ನಾಟಕ ಟೀಮ್ ಮತ್ತು ಜೂನಿಯರ್ ಇಂಡಿಯಾ ಹಾಕಿ ಟೀಮ್ಗೆ ಶುಭಾಶಯ ಕೋರಿದರು.
336 ಕೊಡವ ಕುಟುಂಬ ತಂಡಗಳು ಭಾಗಿ: ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ಈ ಕೊಡವ ಕೌಟುಂಬಿಕ ಹಾಕಿ ಉತ್ಸವ ಏಪ್ರಿಲ್ 9 ರವರೆಗೆ ನಾಪೋಕ್ಲುವಿನಲ್ಲಿ ಜರುಗಲಿದೆ 336 ಕೊಡವ ಕುಟುಂಬ ತಂಡಗಳು ಪಾಲ್ಗೊಳ್ಳುತ್ತಿವೆ. ಕೊಡವ ಕುಟುಂಬಗಳ ನಡುವೆ ನಡೆಯುವ ಹಾಕಿ ಪಂದ್ಯಗಳು ಇಂದಿನಿಂದ ಆರಂಭಗೊಂಡಿವೆ. ಕೊಡವರು ಸಾಂಪ್ರದಾಯಿಕ ಉಡುಗೆ ತೊಟ್ಟು ಹಾಕಿ ಪಂದ್ಯಾಟಗಳನ್ನು ನೋಡಲು ಬಂದಿದ್ದು ವಿಶೇಷವಾಗಿದೆ. ಕೊಡವ ಸಂಸ್ಕ್ರತಿ ಕಲೆ ಆಚಾರ ವಿಚಾರ ಕ್ರೀಡೆಗಳನ್ನು ಉಳಿಸಲು ಇಂಹತ ಕ್ರೀಡಾಕೂಟ ಅವಶ್ಯಕತೆ ಇದೆ. ಇದರಿಂದ ಕೊಡಗಿನಿಂದ ಹಾಕಿ ಕ್ರೀಡೆಗೆ ಅನೇಕ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದು ಕೊಡಗಿನ ಜನರು ಖುಷಿ ಪಡುವ ವಿಷವಾಗಿದೆ ಎಂದು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ:ಕ್ರಿಕೆಟ್ ಇಂಟ್ರೆಸ್ಟಿಂಗ್ ಆಗಿಸಲು ಏನು ಮಾಡಬೇಕು?: ಸಚಿನ್ ತೆಂಡೂಲ್ಕರ್