ಕೊಡಗು (ಮಡಿಕೇರಿ): ಖದೀಮರ ತಂಡವೊಂದು ಬ್ಯಾಂಕ್ ಗೋಡೆ ಒಡೆದು ಕನ್ನ ಹಾಕಿರುವ ಘಟನೆ ಮಕ್ಕಂದೂರಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ತಡರಾತ್ರಿ ನಡೆದಿದೆ.
ಬ್ಯಾಂಕ್ ಗೋಡೆ ಮಾತ್ರ ಒಡೆದಿರುವ ದರೋಡೆಕೋರರು ಸ್ರ್ಟಾಂಗ್ ರೂಮ್ಗೆ ಪ್ರವೇಶಿಸಲು ವಿಫಲರಾಗಿದ್ದಾರೆ. ಪೂರ್ವ ಯೋಜಿತವಾಗಿ ಸಂಚು ರೂಪಿಸಿರುವ ಖದೀಮರು ಮೊದಲು ಬ್ಯಾಂಕ್ಗೆ ಕಲ್ಪಿಸುವ ವಿದ್ಯುತ್ ತಂತಿಯನ್ನು ಕತ್ತರಿಸಿ ಸಿಸಿಟಿವಿಯ ಕಣ್ತಪ್ಪಿಸಿದ್ದಾರೆ. ನಂತರ ಕಬ್ಬಿಣದ ಹಾರೆ ಮತ್ತು ಸಲಾಕೆಗಳಿಂದ ಬ್ಯಾಂಕ್ನ ನಿರ್ಜನ ಪ್ರದೇಶದ ಹಿಂಬದಿಯ ಗೋಡೆಯನ್ನು ಒಡೆದು ಸ್ರ್ಟಾಂಗ್ ರೂಮ್ಗೆ ನುಗ್ಗುಲು ಪ್ರಯತ್ನಿಸಿದ್ದಾರೆ. ನಂತರ ಅದು ಸಾಧ್ಯ ಆಗದೇ ಇರುವುದರಿಂದ ಬಂದ ದಾರಿಗೆ ಸುಂಕವಿಲ್ಲದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಈ ಘಟನೆಯನ್ನು ಸ್ಥಳೀಯರು ಬೆಳಗ್ಗೆ ಗಮನಿಸಿ ವಿಷಯವನ್ನು ಬ್ಯಾಂಕ್ ಸಿಬ್ಬಂದಿಗೆ ತಿಳಿಸಿದ್ದಾರೆ. ಬ್ಯಾಂಕ್ನ ವ್ಯವಸ್ಥಾಪಕರ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ, ಬೆರಳಚ್ಚು ತಜ್ಞರು ಹಾಗೂ ಶ್ವಾನಪತ್ತೆ ದಳ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಇನ್ನೂ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ಹಾರೆ ಹಾಗೂ ಬ್ಯಾಂಕ್ ಹಿಂಬದಿ ಮದ್ಯ ಸೇವಿಸಿ ಬಿಸಾಡಿದ್ದ ಮದ್ಯದ ಬಾಟಲಿಗಳು ಸೇರಿದಂತೆ ಸ್ಥಳೀಯರ ಹೇಳಿಕೆಗಳ ಆಧಾರದ ಮೇಲೆ ಖದೀಮರಿಗೆ ಪೊಲೀಸರು ಬಲೆ ಬೀಸಿದ್ದಾರೆ. ದರೋಡೆಗೆ ವಿಫಲಯತ್ನ ಮಾಡಿದ್ದು, ಯಾವುದೇ ಕಾಗದ ಪತ್ರಗಳಿಗೆ ತೊಂದರೆಯಾಗಿಲ್ಲ. ಹಣವನ್ನು ದೋಚಿಲ್ಲ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ.