ಕೊಡಗು : ಕಾಫಿಯ ತವರೂರು ಕೊಡಗು ಜಿಲ್ಲೆಯಲ್ಲಿ ವಾಣಿಜ್ಯ ಬೆಳೆ ಕಾಫಿ, ಮೆಣಸು ನಂಬಿ ಅದೆಷ್ಟೋ ಕುಟುಂಬಗಳು ಜೀವನ ಸಾಗಿಸುತ್ತಿವೆ. ಕಾಫಿ ಬೆಲೆ ಏರಿಕೆಯಾಗಿದ್ದರೂ, ಅಕಾಲಿಕ ಮಳೆಗೆ ಕಾಫಿ ಬೆಳೆ ಕೈಗೆ ಸಿಕ್ಕದೆ ಬೆಳೆಗಾರರ ಬದುಕು ಮೂರಾಬಟ್ಟೆಯಾಗಿದೆ.
15,100 ರೂ. ಏರಿಕೆಯಾಗಿ ದಾಖಲೆ : ಅರೇಬಿಕಾ ಪಾರ್ಚ್ಮೆಂಟ್ ಕಾಫಿ ಉತ್ಪಾದನಾ ವೆಚ್ಚದ ಹೆಚ್ಚಳವಾಗಿದೆ. ಕಾಡಾನೆ ಹಾವಳಿ, ಕೊರೊನಾ ಲಾಕ್ಡೌನ್ ಹೊಡೆತ ಮತ್ತು ಅಕಾಲಿಕ ಮಳೆಯಿಂದ ಕಂಗೆಟ್ಟಿರುವ ಅರೇಬಿಕಾ ಕಾಫಿ ಬೆಳೆಗಾರರಿಗೆ ಕೊನೆಗೂ ಸಂತಸದ ಸುದ್ದಿ ಬಂದಿದೆ. ಅರೇಬಿಕಾ ಪಾರ್ಚ್ಮೆಂಟ್ ಕಾಫಿ ದರ 50 ಕೆಜಿ ಚೀಲವೊಂದಕ್ಕೆ ಮೂಡಿಗೆರೆಯಲ್ಲಿ 15,100 ರೂ.ಗೆ ಮಾರಾಟವಾಗಿ ಸರ್ವಕಾಲಿಕ ದಾಖಲೆ ನಿರ್ಮಿಸಿದೆ.
1993ರಲ್ಲಿ ಕೇಂದ್ರ ಸರ್ಕಾರ ಕಾಫಿಯ ಮೇಲಿನ ನಿಯಂತ್ರಣ ತೆಗೆದು ಹಾಕಿ ಮುಕ್ತ ಮಾರಾಟಕ್ಕೆ ಅನುಮತಿ ನೀಡಿದ ನಂತರ ಇಷ್ಟೊಂದು ದರ ದೊರೆತಿರುವುದು ಇದೇ ಮೊದಲು. ಕಾಫಿಯ ಈ ದರ ಏರಿಕೆ ಅರೇಬಿಕಾ ಪಾರ್ಚ್ಮೆಂಟ್ ಕಾಫಿಗೆ ಮಾತ್ರ ಸೀಮಿತವಾಗಿದೆ.
ವಿಶ್ವದ ಅತ್ಯಂತ ದೊಡ್ಡ ಕಾಫಿ ಉತ್ಪಾದಕ ದೇಶವಾಗಿರುವ ಬ್ರೆಜಿಲ್ನ ಕಾಫಿ ಉತ್ಪಾದನೆಗೆ ಹಿಮಪಾತದ ಹೊಡೆತ ಬಿದ್ದಿರುವುದೇ ಇಲ್ಲಿನ ದರ ಏರಿಕೆಗೆ ಕಾರಣವಾಗಿದೆ ಎಂಬುವುದು ಕಾಫಿ ತಜ್ಞರ ಅಭಿಪ್ರಾಯವಾಗಿದೆ. ಬ್ರೆಜಿಲ್ನಲ್ಲಿ ಹಿಮಪಾತದಿಂದಾಗಿ ಶೇ.10ರಷ್ಟು ಬೆಳೆ ನಾಶವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅರೇಬಿಕಾ ಕಾಫಿಯ ಸರಬರಾಜಿನಲ್ಲಿ ಕೊರತೆ ಆಗಿದ್ದರಿಂದ ಬೇಡಿಕೆ ಹೆಚ್ಚಾಗಿ ಕಾಫಿ ದರ ಏರಿಕೆಯಾಗಿದೆ. ಅರೇಬಿಕಾ ಚೆರಿ, ರೋಬಸ್ಟಾ ಚೆರಿ ಮತ್ತು ರೋಬಸ್ಟಾ ಪಾರ್ಚ್ಮೆಂಟ್ ಕಾಫಿಯ ದರದಲ್ಲಿ ಏರಿಕೆಯೇನೂ ದಾಖಲಾಗಿಲ್ಲ.
ಅರೇಬಿಕಾ ಚೆರಿ ಕಾಫಿ ದರ 6,450 ರೂ. ಇದೆ. ರೋಬಸ್ಟಾ ಕಾಫಿ ದರ ಚೆರಿ 3,200 ರೂ. ಮತ್ತು ರೊಬಸ್ಟಾ ಪಾರ್ಚ್ಮೆಂಟ್ 6,300 ರೂ. ಇದೆ. ಚೆರಿ ಕಾಫಿಯ ತೇವಾಂಶ ಆಧರಿಸಿ ದರವನ್ನು ನಿಗದಿ ಮಾಡಲಾಗುತ್ತದೆ. ಅರೇಬಿಕಾ ಪಾರ್ಚ್ಮೆಂಟ್ ಕಾಫಿ ದರ 50 ಕೆಜಿಯ ಚೀಲಕ್ಕೆ 11,700 ರೂಪಾಯಿಗಳಿಗೆ ತಲುಪಿದೆ. ಅದು ಆಗಿನ ದಾಖಲೆ ಬೆಲೆ ಎಂದು ಅವರು ಹೇಳಿದರು.
ದರ ಕುಸಿಯುವ ಆತಂಕ : ಕಳೆದ ಜುಲೈ ತಿಂಗಳ ಅಂತ್ಯದಲ್ಲಿ ಕಾಫಿ ದರ ಚೀಲಕ್ಕೆ ₹14,500 ದಾಟಿದ್ದರೂ ಈ ದರ ಹೆಚ್ಚು ದಿನ ಇರಲಿಲ್ಲ. ಈಗ ಬೆಲೆ ಹೆಚ್ಚಾಗಿರುವುದು ಸಂತೋಷ ವಿಷಯ. ಆದ್ರೆ, ಅಕಾಲಿಕ ಮಳೆಗೆ ಕಾಫಿ ನಾಶವಾಗಿದೆ. ಈಗ ಮಳೆ ಹಾಗೂ ಮೋಡ ಕವಿದ ವಾತಾವರಣ ಇರುವುದರಿಂದ ಇರುವ ಕಾಫಿಯನ್ನು ಕೊಯ್ಲು ಮಾಡಿದ್ದರೂ ಒಣಗಿಸಲು ಸಾಧ್ಯವಾಗುತ್ತಿಲ್ಲ. ಕಾಫಿ ದರ ಸ್ಥಿರವಲ್ಲದ್ದರಿಂದ ದರ ಕುಸಿಯುವ ಆತಂಕವೂ ಬೆಳೆಗಾರರರಿಗೆ ಇದೆ.
ಬೆಳೆಗಾರರಿಗೆ ಹೆಚ್ಚಿನ ಲಾಭವಿಲ್ಲ : ಅಕಾಲಿಕ ಮಳೆಯಿಂದ ಬಹುತೇಕ ತೋಟಗಳಲ್ಲಿ ಕಾಫಿ ಹಣ್ಣು ಉದುರಿ ನೆಲದಲ್ಲೇ ಕೊಳೆಯುತ್ತಿದೆ. ಇದನ್ನು ಹೆಕ್ಕಲು ಕಾರ್ಮಿಕರು ಸಿಗುತ್ತಿಲ್ಲ. ಕಾರ್ಮಿಕರಿಗೆ ದಿನಗೂಲಿ ನೀಡಿ ಹೆಕ್ಕಿಸಿದರೂ ಚೆರಿ ಕಾಫಿ ಮಾಡಬಹುದಾಗಿದೆ. ಬೆಳೆಗಾರರಿಗೆ ಹೆಚ್ಚಿನ ಲಾಭವಿಲ್ಲ. ಕಾಫಿಗೆ ಬಂಪರ್ ಬೆಲೆ ಬಂದಿದ್ದರೂ, ಈ ಬಾರಿ ಅಕಾಲಿಕ ಮಳೆಯಿಂದ ಉತ್ಪಾದನೆಗೆ ಹೊಡೆತ ಬಿದ್ದಿದೆ. ಶೇ.30ರಷ್ಟು ಫಸಲು ನಾಶವಾಗಿದೆ. ಹೀಗಾಗಿ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಕಾಫಿ ಬೆಳೆಗಾರರು ಗೋಳಾಡುತ್ತಿದ್ದಾರೆ.
ಇದನ್ನೂ ಓದಿ: ಕೋವಿಡ್ ಹೆಚ್ಚಾದ್ರೆ ಶಾಲೆ ಬಂದ್ ಮಾಡಲು ಸರ್ಕಾರ ಸಿದ್ದ : ಸಚಿವ ಬಿ.ಸಿ.ನಾಗೇಶ್