ಕೊಡಗು: ಜಿಲ್ಲೆಯ ವಸತಿ ರಹಿತ ನಿರಾಶ್ರಿತರಿಗೆ ಬಿಜೆಪಿ ಸರ್ಕಾರದ ವತಿಯಿಂದ ಶಾಶ್ವತ ನಿವೇಶನಗಳನ್ನು ನೀಡಲಾಗುವುದು ಎಂದು ಬಿಜೆಪಿ ನಾಯಕ ಆರ್.ಅಶೋಕ್ ಭರವಸೆ ನೀಡಿದ್ದಾರೆ.
ಗೋಣಿಕೊಪ್ಪ ಹೋಬಳಿಯ ಬೆಕ್ಕೆಸೊಡಲೂರಿನ ಸರ್ಕಾರಿ ಶಾಲೆಯಲ್ಲಿ ತಂಗಿದ್ದ ಸಂತ್ರಸ್ತ ನಿರಾಶ್ರಿತರನ್ನು ಭೇಟಿ ಮಾಡಿ ಅವರಿಗೆ ಬೇಕಾಗುವ ದಿನ ಬಳಕೆಯ ವಸ್ತುಗಳನ್ನು ವಿತರಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇದೀಗ ಬಿಜೆಪಿ ಸರ್ಕಾರವಿದೆ ಸುರಕ್ಷಿತ ಸ್ಥಳದಲ್ಲಿ ಮನೆಗಳನ್ನು ಕೊಡುವುದಾದರೆ ನಾವು ಅಲ್ಲಿಗೆ ಹೋಗುತ್ತೇವೆ ಎಂದು ಸಂತ್ರಸ್ತರು ಹೇಳಿದ್ದು, ಆಯಾ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಶಾಶ್ವತ ನಿವೇಶನಗಳ ನೀಡಲು ಚಿಂತಿಸಿದ್ದೇವೆ ಎಂದು ತಿಳಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೆರೆ ಪೀಡಿತ ಪ್ರದೇಶಗಳ ವಸ್ತು ಸ್ಥಿತಿಯನ್ನು ವೀಕ್ಷಿಸಿದ್ದಾರೆ. ರಾಜ್ಯ ಸರ್ಕಾರ ಕೂಡಲೇ 3 ಕೋಟಿ ಬಿಡುಗಡೆ ಮಾಡುವಂತೆ ಕೇಳಿದ್ದೆವೆ. ಇದಕ್ಕೆ ಅವರೂ ಸಹ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಪ್ರವಾಹ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರ ಆಗಿಲ್ಲ. ಇವುಗಳಿಗೆಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸಲಿವೆ ಎಂದು ಭರವಸೆ ನೀಡಿದರು.
ಶಾಸಕ ಬೋಪಯ್ಯ ನನ್ನೊಂದಿಗೆ ಮಾತನಾಡಿ ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಹಲವರು ತೊಟ್ಟ ಬಟ್ಟೆಯಲ್ಲೇ ಮನೆ ಬಿಟ್ಟು ಬಂದಿದ್ದಾರೆ. ಅವರಿಗೆ ದಿನ ಬಳಕೆ ವಸ್ತುಗಳ ಅಗತ್ಯ ಇದೆ ಎಂದಿದ್ದರು. ಇಡೀ ನಾಡಿಗೆ ನೀರು ಪೂರೈಸುವ ಜಿಲ್ಲೆಗೆ ಇಂತಹ ಸ್ಥಿತಿ ಬಂದಾಗ ಕೈ ಜೋಡಿಸಬೇಕಾಗಿದ್ದು ನಮ್ಮ ಕರ್ತವ್ಯ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯ ಬೇಕಾದರೆ ಅದನ್ನೂ ಪೂರೈಸಲು ಸಿದ್ಧರಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ನೆರೆ ಸಂತ್ರಸ್ತರಿಗೆ ಬೇಳೆ, ಕುಡಿಯುವ ನೀರು, ಬಟ್ಟೆ, ಅಕ್ಕಿ ಸೇರಿದಂತೆ ದಿನ ಬಳಕೆಯ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.